ರಾಮನಗರ: ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಮೊದಲ ಆರೋಪಿ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಬುಧವಾರ ಸಂಜೆ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದಾರೆ. ಭಕ್ತರು ಅವರಿಗೆ ಹಾರ ಹಾಕಿ ಬರಮಾಡಿಕೊಂಡಿದ್ದಾರೆ.
ರಾಮನಗರ ಜಿಲ್ಲಾ ಕಾರಾಗೃಹದಿಂದ ಅವರು ಹೊರ ಬರುತ್ತಿದ್ದಂತೆಯೇ ಭಕ್ತರು ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ ನೀಡಿ ಸಂಭ್ರಮದಿಂದ ಕರೆದೊಯ್ದರು.
ಕಳೆದ ಅಕ್ಟೋಬರ್ 24ರಂದು ಬಂಡೆಮಠದ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೃತ್ಯುಂಜಯ ಸ್ವಾಮೀಜಿ ಬಂಧನಕ್ಕೆ ಒಳಗಾಗಿದ್ದರು.
ಎರಡೂವರೆ ತಿಂಗಳ ಜೈಲುವಾಸದ ಬಳಿಕ ಅವರಿಗೆ ಹೈಕೋರ್ಟ್ ಇದೇ 13ರಂದು ಜಾಮೀನು ಮಂಜೂರು ಮಾಡಿತ್ತು.