ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ‘ಅನ್‌ಲಾಕ್’‌: ಒಂದಿಷ್ಟು ವಿನಾಯಿತಿ

ಅಗತ್ಯ ವಸ್ತು ಖರೀದಿಗೆ ಮಧ್ಯಾಹ್ನ 2ರವರೆಗೆ ಅವಕಾಶ
Last Updated 13 ಜೂನ್ 2021, 4:42 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವ ಕಾರಣ ಸೋಮವಾರದಿಂದ ಲಾಕ್‌ಡೌನ್‌ ಸಡಿಲವಾಗಲಿದೆ. ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಇರಲಿದ್ದು, ನಂತರದಲ್ಲಿ ಕರ್ಫ್ಯೂ ಮುಂದುವರಿಯಲಿದೆ.

ಕಳೆದ ಒಂದೂವರೆ ತಿಂಗಳಿಂದ ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತು ಖರೀದಿ ಮತ್ತು ಸೇವೆಗಳಿಗೆ ಅವಕಾಶ ಇತ್ತು. ಸರ್ಕಾರ ಇದೇ 14ರಿಂದ ಈ ಅವಧಿಯನ್ನು ಮಧ್ಯಾಹ್ನ 2ರವರೆಗೆ ವಿಸ್ತರಿಸಿದೆ. ಉಳಿದ ಸಮಯದಲ್ಲಿ ಈ ಹಿಂದಿನ ಲಾಕ್‌ಡೌನ್‌ ನಿಯಮಗಳೇ ಜಾರಿಯಲ್ಲಿ ಇರಲಿವೆ.

ದಿನಸಿ ಅಂಗಡಿಗಳು, ಹಾಲು, ಮಾಂಸ ಮಾರಾಟ, ಮೆಡಿಕಲ್‌ ಸ್ಟೋರ್‌ಗಳು ಮಧ್ಯಾಹ್ನ 2ರವರೆಗೆ ತೆರೆಯಬಹುದು. ಮದ್ಯ ಮಾರಾಟಕ್ಕೂ ಈ ಅವಧಿಯಲ್ಲಿ ಅವಕಾಶ ಇದೆ. ಈ ಬಾರಿ ಇವುಗಳ ಜೊತೆಗೆ ಕನ್ನಡಕ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಜವಳಿ ಅಂಗಡಿ, ಆಭರಣ ಮಳಿಗೆ, ಪೀಠೋಕರಣ ಮೊದಲಾದ ಮಳಿಗೆಗಳಲ್ಲಿನ ವ್ಯಾಪಾರಕ್ಕೆ ನಿರ್ಬಂಧ ಮುಂದುವರಿದಿದೆ. ಆಟೊ, ಕ್ಯಾಬ್‌ಗಳ ಓಡಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಆದರೆ, ವಾಹನದಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಸಂಚರಿಸಬಹುದು ಎಂಬ ಷರತ್ತು ಹಾಕಲಾಗಿದೆ.

ಓಡಾಡಿದರೆ ಕ್ರಮ: ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಜನರು ಅಗತ್ಯ ಕೆಲಸಗಳಿಗೆ ಈಚೆ ಬರಬಹುದು. ನಂತರದಲ್ಲೂ ಓಡಾಟ ಮುಂದುವರಿಸಿದರೆ ಕ್ರಮ ಖಂಡಿತ ಎಂದು ಪೊಲೀಸರು ಎಚ್ಚರಿಸುತ್ತಾರೆ.

ಅಂತರ ಜಿಲ್ಲಾ ಓಡಾಟಕ್ಕೂ ಕಡಿವಾಣ: ಅಕ್ಕಪಕ್ಕದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ 14ರ ನಂತರವೂ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಇಲ್ಲಿಂದ ಓಡಾಡುವವರು ಎಚ್ಚರ ವಹಿಸಬೇಕಾಗುತ್ತದೆ. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಕಾವಲು ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT