ಚನ್ನಪಟ್ಟಣ: ತಾಲ್ಲೂಕಿನ ವಿರುಪಾಕ್ಷಿಪುರ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಮಂಗಳವಾರ ರಾತ್ರಿ ದಾಳಿ ನಡೆಸಿ ರೈತರ ಬೆಳೆಗಳನ್ನು ನಾಶಪಡಿಸಿವೆ.
ಗ್ರಾಮದ ರೈತರಾದ ಶಿವಲಿಂಗಯ್ಯ, ಶ್ರೀನಿವಾಸ್, ಗೋವಿಂದೇಗೌಡ ಅವರ ಬಾಳೆ, ಮಾವು, ಅಡಿಕೆ, ತೆಂಗು ಬೆಳೆ ದಾಳಿಗೆ ತುತ್ತಾಗಿವೆ.
ಸುಮಾರು 7 ಆನೆಗಳಿದ್ದ ಹಿಂಡು ಪಕ್ಕದ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಬಂದಿವೆ. ಕೆಲವೇ ದಿನಗಳಲ್ಲಿ ಗೊನೆ ಬರಲಿದ್ದ ನೂರಾರು ಬಾಳೆ ಗಿಡಗಳನ್ನು ಧ್ವಂಸ ಮಾಡಿವೆ. ಮಾವಿನ ಮರದ ರೆಂಬೆಗಳು ಮುರಿದು ಹಾಕಿವೆ. ಅಡಿಕೆ, ತೆಂಗಿನ ಸಸಿಗಳನ್ನು ಕಿತ್ತು ಬಿಸಾಡಿವೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಅರಣ್ಯ ಇಲಾಖೆ ಆನೆಗಳ ಹಾವಳಿ ನಿಯಂತ್ರಣಕ್ಕೆ ತರಬೇಕು. ಜೊತೆಗೆ ಪರಿಹಾರ ವಿತರಿಸಬೇಕು ಎಂದು ಮನವಿ ಮಾಡಿದ್ದಾರೆ.