ಕನಕಪುರ: ಮಲಗಿದ್ದ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತಿಯೇ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಸಾತನೂರು ಹೋಬಳಿಯ ಕಂಚನಹಳ್ಳಿಯಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಲಕ್ಷ್ಮಮ್ಮ (35) ಕೊಲೆಯಾದ ಗೃಹಿಣಿ. ಈಕೆಯ ಪತಿ ರವಿ ಕೊಲೆ ಮಾಡಿದ್ದು, ಪೊಲೀಸರು ಬಂಧಿಸಿದ್ದಾರೆ.
ರವಿ ಹಲಗೂರು ಹೋಬಳಿಯ ಗೊಲ್ಲರಳ್ಳಿ ಗ್ರಾಮದವರಾಗಿದ್ದು 15 ವರ್ಷಗಳ ಹಿಂದೆ ಲಕ್ಷ್ಮಮ್ಮ ಅವರನ್ನು ಪ್ರೀತಿಸಿ ಅಂತರ್ಜಾತಿ ವಿವಾಹ ಮಾಡಿಕೊಂಡು ಮದ್ದೂರಿನಲ್ಲಿ ವಾಸವಿದ್ದರು. ದಂಪತಿಗೆ 12 ವರ್ಷದ ಗಂಡು ಮಗನಿದ್ದಾನೆ.
ಶನಿವಾರ ದಂಪತಿ ಮತ್ತು ಮಗ ಲಕ್ಷ್ಮಮ್ಮ ಅವರ ತಾಯಿ ಮನೆಯಾದ ಕಂಚನಹಳ್ಳಿಗೆ ಬಂದಿದ್ದಾರೆ. ಈ ವೇಳೆ ದಂಪತಿ ನಡುವೆ ರಾತ್ರಿ ಗಲಾಟೆ ನಡೆದಿದೆ.ಭಾನುವಾರ ಬೆಳಿಗ್ಗೆ ಮನೆಯಿಂದ ಹೊರಹೋದ ರವಿ ಕುಡಿದು ಬಂದು ಮನೆಯಲ್ಲಿ ತಾಯಿಯೊಂದಿಗೆ ಮಲಗಿದ್ದ ಲಕ್ಷ್ಮಮ್ಮ ಅವರ ತಲೆ ಮೇಲೆ ಕಾರ ಅರೆಯುವ ಕಲ್ಲನ್ನು ಎತ್ತಿಹಾಕಿದ್ದಾನೆ.
ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಮೋಹನ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಟಿ.ಟಿ. ಕೃಷ್ಣ, ಸಬ್ ಇನ್ಸ್ಪೆಕ್ಟರ್ ರವಿಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.