ಚನ್ನಪಟ್ಟಣ: ಸಾಲಕ್ಕಾಗಿ ಬ್ಯಾಂಕ್ಗಳಿಂದ ನೋಟಿಸ್ ನೀಡುವುದು, ಒತ್ತಾಯಿಸುವುದು, ಲೇವಾದೇವಿಗಾರರು ಹಣಕ್ಕಾಗಿ ಪೀಡಿಸುವುದು ನಡೆದಲ್ಲಿ ರೈತರು ನೇರವಾಗಿ ರೈತಸಂಘವನ್ನು ಸಂಪರ್ಕಿಸಬಹುದು ಎಂದು ರೈತ ಸಂಘದ ಹಿರಿಯ ಮುಖಂಡ ಕೆ.ಎಸ್.ಲಕ್ಷ್ಮಣಸ್ವಾಮಿ ಹೇಳಿದರು.
ತಾಲ್ಲೂಕಿನ ಎಂ.ಬಿ.ಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ ಕಾರ್ಪೊರೇಷನ್ ಬ್ಯಾಂಕಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ನೋಟಿಸ್ ನೀಡದಂತೆ ಮಾತುಕತೆ ನಡೆಸಲಾಗಿದೆ. ಸರ್ಕಾರವೂ ಕೂಡ ಖಾಸಗಿ ಲೇವಾದೇವಿದಾರರ ವಿರುದ್ದ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ರೈತರು ಆತ್ಮಹತ್ಯೆಗೆ ಶರಣಾಗಬಾರದು ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಾರಾಯಣಮೂರ್ತಿ ಮಾತನಾಡಿ, ರೈತರು ಬ್ಯಾಂಕಿನಲ್ಲಿ ಸಾಲ ಪಡೆದು ಮರುಪಾವತಿ ಮಾಡಲಾಗದಿದ್ದರೆ ಬ್ಯಾಂಕಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕಾಲಾವಕಾಶ ತೆಗೆದುಕೊಳ್ಳಬೇಕು. ಆತ್ಮಹತ್ಯೆ ದಾರಿ ತುಳಿಯಬಾರದು. ಆತ್ಮಹತ್ಯೆಯೇ ರೈತರಿಗೆ ಕೊನೆಯ ದಾರಿಯಲ್ಲ, ಅದಕ್ಕೂ ಮಿಗಿಲಾಗಿ ಬದುಕಿದೆ, ಸಾಲಕ್ಕೆ ಹೆದರುವುದು ಬೇಡ ಎಂದು ಅವರು ಕೋರಿದರು.
ಬ್ಯಾಂಕ್ ಎರಡು ವರ್ಷದಲ್ಲಿ ₨ 8 ಕೋಟಿಗೂ ಹೆಚ್ಚು ವಹಿವಾಟು ನಡೆಸಿದೆ. ಇದರಲ್ಲಿ ₨5.5 ಲಕ್ಷ ಸಾಲ ನೀಡಿದೆ. ಗ್ರಾಹಕರ ₨ 2 ಕೋಟಿ ಠೇವಣಿ ಇರಿಸಿಕೊಳ್ಳಲಾಗಿದೆ. ಪ್ರಧಾನಮಂತ್ರಿಯವರ ವಿಮಾ ಯೋಜನೆಗೆ ಗ್ರಾಹಕರು ಒಳಪಟ್ಟು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಾರಾಯಣಮೂರ್ತಿ ತಿಳಿಸಿದರು.
ಕಾರ್ಪೊರೇಷನ್ ಬ್ಯಾಂಕ್ ಡಿಜಿಎಂ ಸುರೇಶ್ ಮಾತನಾಡಿ, ಬ್ಯಾಂಕ್ ವೈಯಕ್ತಿಕ ಸಾಲಗಳ ಜೊತೆಗೆ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದರೆ ಬ್ಯಾಂಕಿನ ಅಭಿವೃದ್ದಿಗೂ ಸಹಕಾರ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.
ಗ್ರಾ.ಪಂ.ಅಧ್ಯಕ್ಷ ತಿಮ್ಮರಾಯಿಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾಂಕ್ ಶಾಖಾ ವ್ಯವಸ್ಥಾಪಕಿ ಚಂದ್ರಕಲಾ, ಗ್ರಾ.ಪಂ.ಮಾಜಿ ಅಧ್ಯಕ್ಷ ಸಣ್ಣಪ್ಪ ಭಾಗವಹಿಸಿದ್ದರು.
*
ಮಳೆಯಾಧಾರಿತ ರಾಗಿ ಬೆಳೆಗೆ ಎಕರೆಗೆ ₨ 40 ಸಾವಿರ ವಿಮೆ ನೀಡಬೇಕು. ಸ್ತ್ರೀಶಕ್ತಿ ಸಂಘಗಳಿಗೆ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಸಾಲ ನೀಡಬೇಕು. ಬಲವಂತದ ವಸೂಲಿ ಬೇಡ
-ತಿಮ್ಮರಾಯಿಗೌಡ,
ಗ್ರಾ.ಪಂ.ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.