ಕನಕಪುರ: ನಗರದ ಹೌಸಿಂಗ್ ಬೋರ್ಡ್ ಬಡಾವಣೆಯ ಕಾನಕಾನಹಳ್ಳಿಯ ಉದ್ಯಾನವನದ ನಾರಾಯಣಪ್ಪನ ಕೆರೆಯು ಮಳೆಯ ನೀರಿಗೆ ತುಂಬಿ ಕೋಡಿ ಬಿದ್ದಿರುವುದಕ್ಕೆ ಪಟ್ಟಣದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕೆರೆಯನ್ನು ಅಭಿವೃದ್ಧಿಗೊಳಿಸಿ ಸುಸಜ್ಜಿತವಾದ ಉದ್ಯಾನವನ ಮಾಡಬೇಕೆಂದು ಜನರಿಗೆ ಮಹದಾಸೆಯಿತ್ತು. ಅಂತಹ ಆಸೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಕೆರೆಯನ್ನು ಅಭಿವೃದ್ಧಿ ಪಡಿಸುವ ಮೂಲಕ ಜನರ ಭಾವನೆಗೆ ಸ್ಪಂದಿಸಿದ್ದರು.
ಅವರ ಪ್ರಯತ್ನದ ಫಲವಾಗಿ ಕೆರೆ ಅಭಿವೃದ್ಧಿ ಕಾರ್ಯ ನಡೆದಿದೆ. ಈ ನಡುವೆ ಭಾರಿ ಮಳೆಗೆ ಕೆರೆಯು ಪೂರ್ಣ ತುಂಬಿ ಕೋಡಿಬಿದ್ದಿದೆ. ಬೆಂಗಳೂರು ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಕೆರೆ ಇರುವುದರಿಂದ ನೋಡುಗರ ಮನಸ್ಸನ್ನು ಆಕರ್ಷಿಸುತ್ತಿದೆ.