ಕನಕಪುರ: `ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಜನಪರ ಕೆಲಸಗಳನ್ನು ಹೆಚ್ಚು ಮುತುವರ್ಜಿಯಿಂದ ಮಾಡಬೇಕು ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು' ಎಂದು ಜಿಲ್ಲಾ ಪಂಚಾಯಿತಿ ಸಿ.ಇ.ಒ. ಡಾ. ವೆಂಕಟೇಶ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಜರುಗಿದ ಪಂಚಾಯ್ತಿ ಅಧ್ಯಕ್ಷರು ಹಾಗೂ ಪಿ.ಡಿ.ಒ.ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿರ್ಮಲ ಗ್ರಾಮ ಯೋಜನೆಯಡಿ ಪ್ರತಿಯೊಂದು ಗ್ರಾಮಗಳಲ್ಲಿ ಪ್ರತಿ ಮನೆಗಳು ಶೌಚಾಲಯ ಹೊಂದಿರಬೇಕು ಎಂಬುದು ಕೇಂದ್ರ ಸರ್ಕಾರದ ಕನಸು. ಇದನ್ನು ನನಸು ಮಾಡಬೇಕಾದರೆ ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳು ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು' ಎಂದರು.
`ಪ್ರತಿ ತಿಂಗಳೂ 50ಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಲು ಅವಕಾಶವಿದೆ. ಹೆಚ್ಚಿನ ಅವಶ್ಯಕತೆ ಕಂಡು ಬಂದಲ್ಲಿ ಅದಕ್ಕೆ ಸರ್ಕಾರ ಎಲ್ಲ ಸಹಾಯ ಒದಗಿಸಲು ಸಿದ್ಧವಿದೆ. ಶೌಚಾಲಯಗಳನ್ನು ನಿರ್ಮಿಸಿ ಕಾಲರಾ, ವಾಂತಿ ಭೇದಿಯಂತಹ ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಗಟ್ಟಬೇಕು' ಎಂದು ಸಲಹೆ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಬೋರ್ವೆಲ್ಗಳು ಸ್ಥಗಿತಗೊಂಡಿದ್ದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸದಿರುವುದರಿಂದ ಅನಗತ್ಯವಾಗಿ ವಿದ್ಯುತ್ ಬಿಲ್ ಬರುತ್ತಿದೆ. ಆದ್ದರಿಂದ ಬೆಸ್ಕಾಂ ಇಲಾಖೆ ಕೂಡಲೆ ವಿದ್ಯುತ್ ಸಂಪರ್ಕ ಕಡಿತ ಗೊಳಿಸಬೇಕು ಎಂದು ಮನವಿ ಮಾಡುವಂತೆ ಅವರು ಸೂಚಿಸಿದರು.
ನರೇಗಾ ಯೋಜನೆಯಡಿ ಕೃಷಿ, ಪಶು ಸಂಗೋಪನೆ, ಹೈನುಗಾರಿಕೆ, ತೋಟಗಾರಿಕಾ ಇಲಾಖೆಗಳಲ್ಲಿ ವೈಯುಕ್ತಿಕ ಫಲಾನುಭವಿಗಳಿಗೂಹೆಚ್ಚಿನ ಆದ್ಯತೆ ಇದ್ದು ರೈತರು ತಂತಮ್ಮ ಜಮೀನುಗಳು, ತೋಟಗಳಲ್ಲಿ ಗಿಡ ನೆಡುವುದು, ಸೇರಿದಂತೆ ಇನ್ನಿತರೆ ಕೆಲಸಗಳನ್ನು ಮಾಡಲು ಅವಕಾಶವಿದೆ. ಆದ್ದರಿಂದ ಯೋಜನೆಗಳ ಲಾಭ ಪಡೆದುಕೊಳ್ಳಲು ಉತ್ತೇಜಿಸಬೇಕು ಎಂದರು.
ಪಂಚಾಯ್ತಿ ವ್ಯಾಪ್ತಿಯಲ್ಲಿ ಜೀತ ಪದ್ಧತಿ, ಬಾಲ್ಯ ವಿವಾಹಗಳು ಕಂಡುಬಂದರೆ, ಅವುಗಳನ್ನು ತಡೆಗಟ್ಟಲು ಜಿಲ್ಲಾ ಉಪ ವಿಭಾಗಾಧಿಕಾರಿಗಳು, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಣಾಧಿಕಾರಿಗಳಿಗೆ ಕೂಡಲೆ ತಿಳಿಸಬೇಕು ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಭ್ರೂಣಹತ್ಯೆ ಪ್ರಕರಣ ತಡೆಗಟ್ಟಬೇಕು. ಅಂತಹ ಪ್ರಕರಣ ಗಮನಕ್ಕೆ ಬಂದರೆ ತಕ್ಷಣವೇ ತಹಶೀಲ್ದಾರ್ ಹಾಗೂ ಜಾಗೃತ ಸಮಿತಿಯ ಸದಸ್ಯರ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಣಾಧಿಕಾರಿ ಜೆ.ಜಿ.ನಾಯಕ್, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಡಾ. ಸಿದ್ಧರಾಮಣ್ಣ, ಎನ್.ಬಿ. ವ್ಯವಸ್ಥಾಪಕ ಬಿ.ಎಸ್. ಸತೀಶ್, ನಿರ್ಮಲ್ ಭಾರತ್ ಅಭಿಯಾನದ ಸಂಯೋಜಕಿ ಶಶಿಕಲಾ, ನರೇಗಾ, ವಸತಿ ಸಂಯೋಜಕರು ಹಾಗೂ ಎಲ್ಲಾ ಪಂಚಾಯ್ತಿ ಅಧ್ಯಕ್ಷರು, ಪಿ.ಡಿ.ಒಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.