ಕನಕಪುರ: ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ, ನಲ್ಲಹಳ್ಳಿ ದೊಡ್ಡಿ ಕೈಲಾಸಗಿರಿ ನಾಗಮಲೆ ಮಹದೇಶ್ವರ ಸ್ವಾಮಿ ಮಠದಲ್ಲಿ 2ನೇ ವರ್ಷದ ಹಾಲರವಿ ಸೇವೆ ವಿಜೃಂಭಣೆಯಿಂದ ನಡೆಯಿತು.
ನಲ್ಲಹಳ್ಳಿ ದೊಡ್ದಿ ಗ್ರಾಮದ ಬಳಿ ಇರುವ ಮಹದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ತುಂತುರು ಮಳೆಯ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹಾಲರವಿ ಸೇವೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸುವ ಮೂಲಕ ಭಕ್ತಿಭಾವ ಮೆರೆದರು.
ಬೆಳಿಗ್ಗೆ 9.30 ರಿಂದಲೇ ನಾಗಮಲೆಯ ಒಡೆಯ ಮಹದೇವಸ್ವಾಮಿಯವರ ನೇತೃತ್ವದಲ್ಲಿ ಅದ್ಧೂರಿ ಉತ್ಸವ ಮೂರ್ತಿ ಮೆರವಣಿಗೆ 15 ಗ್ರಾಮ ದೇವತೆಗಳ ಮೆರವಣಿಗೆ ನಡೆಸಲಾಯಿತು.
ಕಬ್ಬಾಳಮ್ಮ ದಂಡಿನಮಾರಮ್ಮ, ಕ್ಯಾತಮ್ಮ, ಬಿಸಿಲಮ್ಮ, ಮಹದೇಶ್ವರ, ಶಂಭುಲಿಂಗೇಶ್ವರ, ಬಸವೇಶ್ವರ, ಸಿದ್ದಪ್ಪಾಜಿ ದೇವರುಗಳು ಮೆರವಣಿಗೆಲ್ಲಿ ದ್ದವು. ಸುರಿವ ಮಳೆಯ ನಡುವೆಯೂ ಸಾವಿರಾರು ಭಕ್ತರು ತಮ್ಮ ಹರಕೆಯನ್ನು ತೀರಿಸಿದರು.
ತಾಲ್ಲೂಕಿನ ಚುಂಚಿಕಾಲೋನಿ, ನಲ್ಲ ಹಳ್ಳಿ, ಏಳಗಳ್ಳಿ, ಹಾರೋಶಿವನಹಳ್ಳಿ, ಅಡಿಕೆಹಳ್ಳ ಸೇರಿದಂತೆ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕಿನಿಂದಲೂ ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಭಕ್ತರಿಗೆ ಮಜ್ಜಿಗೆ ಪಾನಕ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ ಕುಣಿತ, ನಂದಿಧ್ವಜ, ತಮಟೆ, ನಾದಸ್ವರ, ನಗಾರಿ ಕುಣಿತ ಸೇರಿದಂತೆ ಅನೇಕ ಜನಪದ ಕಲಾ ತಂಡ ಮೆರವಣಿಗೆ ಹಾಗೂ ದೇವರ ಉತ್ಸವ ನಡೆಯಿತು. ಹಿರಿಯ ಮುಖಂಡರಾದ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎನ್.ಶಿವರಾಂ, ಗ್ರಾ.ಪಂ. ಮಾಜಿ ಸದಸ್ಯರಾದ ಶಿವರಾಜ್, ರಮೇಶ್, ಊರ ಯಜಮಾನ ಶಿವಸಿದ್ದಯ್ಯ, ಕಾಡಯ್ಯ, ಚೂಡಾಮಣಿ ಸ್ವಾಮಿ, ದಂಡಮಾರಮ್ಮ ದೇವಿ ಪೂಜಾರಿ ಶಿವಣ್ಣ, ಚುಂಚಿಶಿವಣ್ಣ, ನಾಗಸಿದ್ದಯ್ಯ, ಡಾ. ಶಿವರಾಜ್ ಮುಖಂಡತ್ವದಲ್ಲಿ ನಡೆಯಿತು.