ರಾಮನಗರ: ತಾಲ್ಲೂಕಿನ ಕೈಲಾಂಚ ಗ್ರಾಮದಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ನಲ್ಲಿ ಶನಿವಾರ ಸಂಜೆ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ್ದು, ಸ್ಥಳೀಯರು ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕನಕಪುರದವರಾದ ಸುದೀಪ್, ಪ್ರದೀಪ್ ಹಾಗೂ ಸುನಿಲ್ ಬಂಧನಕ್ಕೆ ಒಳಗಾದವರು. ರಾತ್ರಿ ಏಳರ ಸುಮಾರಿಗೆ ಪೆಟ್ರೋಲ್ ಹಾಕಿಸಲೆಂದು ಬಂಕ್ಗೆ ಬಂದ ದುಷ್ಕರ್ಮಿಗಳು ಅಲ್ಲಿನ ಕಾರ್ಮಿಕರೊಂದಿಗೆ ಗಲಾಟೆ ನಡೆಸಿ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಕ್ಯಾಷಿಯರ್ನಿಂದ ₹ 30 ಸಾವಿರ ನಗದು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.
ಒಟ್ಟು ಏಳು ಆರೋಪಿಗಳು ಇದ್ದರು ಎನ್ನಲಾಗಿದ್ದು, ಅವರಲ್ಲಿ ಒಬ್ಬನನ್ನು ಸ್ಥಳೀಯರು ಸ್ಥಳದಲ್ಲಿಯೇ ಹಿಡಿದರೆ, ಉಳಿದಿಬ್ಬರು ಕೆರೆಗೆ ಹಾರಿದ್ದು, ಅವರನ್ನೂ ಬೆನ್ನಟ್ಟಿ ಹಿಡಿದಿದ್ದಾರೆ. ಉಳಿದ ನಾಲ್ವರು ಪರಾರಿಯಾದರು ಎನ್ನಲಾಗಿದೆ.
ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ವಶಕ್ಕೆ ಪಡೆದರು. ಪೆಟ್ರೋಲ್ ಬಂಕ್ ಬಳಿ ನೂರಾರು ಮಂದಿ ಜಮಾಯಿಸಿದ್ದರು.