ರಾಮನಗರ: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಮುಂಬೈನಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎನ್ನಲಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಗಣೇಶ್ ಮುಂಬೈನ ಹೋಟೆಲ್ ಒಂದರಲ್ಲಿ ಇದ್ದಾರೆ ಎನ್ನುವ ಮಾಹಿತಿ ಆಧರಿಸಿ ಬಿಡದಿ ಪೊಲೀಸರು ಅಲ್ಲಿಗೆ ತೆರಳಿದ್ದರು. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಅವರು ಸ್ಥಳಕ್ಕೆ ಹೋಗುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದರು. ಗಣೇಶ್ ಪುಣೆಯತ್ತ ಹೊರಟಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ ಎನ್ನಲಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ವಿಷಯವನ್ನು ಖಚಿತಪಡಿಸಿಲ್ಲ.
ವಕೀಲರಿಂದ ಅರ್ಜಿ: ಗಣೇಶ್ ವಿರುದ್ಧದ ದೂರಿನ ಎಫ್ಐಆರ್, ಅದಕ್ಕೆ ಅಡಕವಾಗಿರುವ ದಾಖಲಾತಿಗಳು ಹಾಗೂ ಆನಂದ್ ಸಿಂಗ್ ಹೇಳಿಕೆ ಪ್ರತಿಗಳನ್ನು ಒದಗಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲು ಕೋರಿ ಬಿಜೆಪಿ ಕಾರ್ಯಕರ್ತ, ವಕೀಲ ವಿನೋದ್ ಎಂಬುವರು ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ.
‘ವೈಯಕ್ತಿಕ ಆಸಕ್ತಿಯಿಂದ ಈ ಅರ್ಜಿ ಸಲ್ಲಿಸಿದ್ದೇನೆ. ಈ ಬಗ್ಗೆ ಬಿಜೆಪಿಯ ಯಾವ ಮುಖಂಡರೂ ಹೇಳಿಲ್ಲ’ ಎಂದು ವಿನೋದ್ ತಿಳಿಸಿದರು.
ಪೊಲೀಸರ ಹಿಂದೇಟು? ಶಾಸಕ ಜೆ.ಎನ್. ಗಣೇಶ್ ಫೇಸ್ಬುಕ್ನಲ್ಲಿ ಘಟನೆಯ ವಿವರಗಳನ್ನು ಪೋಸ್ಟ್ ಮಾಡಿದ್ದಾರೆ. ಇದರ ಜಾಡು ಹಿಡಿದು ಪೊಲೀಸರು ತನಿಖೆಯನ್ನು ಯಾಕೆ ಮುಂದುವರಿಸುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಸೈಬರ್ ಪೊಲೀಸರು ಫೇಸ್ಬುಕ್ ಬರಹ ಪ್ರಕಟಗೊಂಡ ಐ.ಪಿ. ವಿಳಾಸ ಹುಡುಕಿದಲ್ಲಿ ಅವರು ಅಥವಾ ಅವರ ಹೆಸರಿನಲ್ಲಿ ಪೋಸ್ಟ್ ಹಾಕಿದವರ ವಿಳಾಸ ಸುಲಭವಾಗಿ ಪತ್ತೆ ಆಗಲಿದೆ. ಇದು ಆರೋಪಿಯ ಪತ್ತೆಗೆ ನೆರವಾಗುವ ಸಾಧ್ಯತೆ ಇದೆ.