ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ ಶರಣರ ಕೊಡುಗೆ ಅಪಾರ

ಚಲನಚಿತ್ರ ನಿರ್ದೇಶಕ ಲಾಯಪ್ಪ ಇಂಗಳೆ ಅಭಿಮತ
Last Updated 22 ಫೆಬ್ರುವರಿ 2020, 9:43 IST
ಅಕ್ಷರ ಗಾತ್ರ

ವಿಜಯಪುರ: ‘ಕಾಯಕ ಶರಣರನ್ನು ಅಂದು ಪಂಚಕರ್ಮರು ಅಂತ ಕೆರೆಯಲಾಗುತ್ತಿತ್ತು. ಅವರು ಕಾಯಕ, ದಾಸೋಹ ಹಾಗೂ ವಚನಗಳಿಂದ ಸಮಾಜವನ್ನು ತಿದ್ದುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದರು’ ಎಂದು ಚಲನಚಿತ್ರ ನಿರ್ದೇಶಕ ಲಾಯಪ್ಪ ಇಂಗಳೆ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿಯಲ್ಲಿ ಅವರು ಮಾತನಾಡಿದರು.

‘ಕಾಯಕ ಶರಣರು ಎಂದು ಕರೆಯಿಸಿಕೊಳ್ಳುವ ಮಾದಾರ ಚನ್ನಯ್ಯ, ಮಾದರ ಧೂಳಯ್ಯ, ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರು ತಮ್ಮ ಕಾಯಕದಿಂದ ಗುರುತಿಸಿಕೊಂಡವರು. ಕಾಯಕದ ಮೇಲೆ ಜಾತಿ ಮಾಡಬಾರದು. ಯಾವ ಕಾಯಕವೂ ದೊಡ್ಡದಲ್ಲ, ಮನಸ್ಸಿನಿಂದ ಮಾಡುವ ಯಾವ ಕಾಯಕವೂ ಸಣ್ಣದಲ್ಲ ಎಂದು ಸಾರಿದ ಮಹಾನಭಾವರು ಈ ಕಾಯಕ ಶರಣರು’ ಎಂದು ಅಭಿಪ್ರಾಯಪಟ್ಟರು.

‘ಮಾದಾರ ಚನ್ನಯ್ಯ ಅವರು ಬಸವಣ್ಣರಿಗಿಂತ ಹಿರಿಯರಾಗಿದ್ದು, ಚರ್ಮದ ಚಪ್ಪಲಿ ಹೊಲೆಯುವ ಕಾಯಕ ಮಾಡುತ್ತಿದ್ದರು. ಅವರ ವಚನದ ಅಂಕಿತ ನಾಮವನ್ನು ತನ್ನ ಪರಿಕರಣಗಳನ್ನೆ ಮಾಡಿಕೊಂಡ ೇಕೈಕ ವಚನಕಾರ ಮಾದಾರ ಚನ್ನಯ್ಯ ಅವರಾಗಿದ್ದಾರೆ. ಅವರು ತಮ್ಮ ಕಾಯಕದಿಂದಲೇ ಶಿವನನ್ನು ಒಲಿಸಿಕೊಂಡು, ಅಂಬಲಿಯನ್ನು ಸೇವೆಗೆ ನೀಡಿದ್ದ ಮಹಾನ್‌ ಕಾಯಕಯೋಗಿ ಆಗಿದ್ದಾರೆ. ತಮ್ಮ ವಚನಗಳ ಮೂಲಕ ಸಮಾಜದ ಅನೇಕ ಅಸಮಾನತೆಗಳನ್ನು ದೂರ ಮಾಡುವಲ್ಲಿ ಮಾದಾರ ಚನ್ನಯ್ಯ ಅಗ್ರಗಣ್ಯರಾಗಿದ್ದಾರೆ’ ಎಂದು ಹೇಳಿದರು.

‘ಮಾದಾರ ಧೂಳಯ್ಯ ಒಬ್ಬ ಪ್ರಖರ ವಚನಕಾರರಾಗಿದ್ದರು. ಇವರು ತಮ್ಮ ಜೀವನದಲ್ಲಿ ಒಟ್ಟು 300ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಢೋಹರ ಕಕ್ಕಯ್ಯ ಅವರು ಬರೆದ ಒಟ್ಟು ವಚನಗಳಲ್ಲಿ ಸಿಕ್ಕಿದ್ದು ಕೇವಲ ಆರು ವಚನಗಳು ಮಾತ್ರ. ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಇಬ್ಬರು ಮಹಾನ್‌ ವ್ಯಕ್ತಿಗಳಾಗಿದ್ದರು. ಸಮಗಾರ ಹರಳಯ್ಯ ಒಟ್ಟು 366 ವಚನಗಳನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ, ಸಂಗಮೇಶ ಬಾದಾಮಿ, ಅಶೋಕ ಸೌದಾಗರ, ಹಾದಿರಾಮ ಪವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT