ತೀರ್ಥಹಳ್ಳಿ: ಕಲ್ಪವೃಕ್ಷ ಪತ್ತಿನ ಸಹಕಾರ ಸಂಘ ವಾರ್ಷಿಕ ₹ 4 ಕೋಟಿಗೂ ಅಧಿಕ ವ್ಯವಹಾರ ನಡೆಸಿ ₹ 13 ಲಕ್ಷ ಲಾಭ ಗಳಿಸಿದೆ ಎಂದು ಅಧ್ಯಕ್ಷ ಇ.ಎಸ್. ಶ್ರೀಧರಮೂರ್ತಿ ಇರೆಗೋಡು ತಿಳಿಸಿದರು.
448 ಷೇರುದಾರ ಸದಸ್ಯರಿಂದ 2015ರಲ್ಲಿ ಆರಂಭವಾದ ಸಂಘವು. ಹಾಲಿ 975 ಷೇರುದಾರ ಸದಸ್ಯರನ್ನು ಹೊಂದಿದೆ. ₹ 4 ಲಕ್ಷದವರೆಗೆ ಗರಿಷ್ಠ ಸಾಲ ನೀಡುತ್ತಿದ್ದೇವೆ. ₹ 10 ಲಕ್ಷಕ್ಕೂ ಹೆಚ್ಚು ಹಣವನ್ನು ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದಿಂದ ಒಟ್ಟು ₹ 1.64 ಕೋಟಿ ಸಾಲ ವಿತರಿಸಲಾಗಿದೆ. 351 ಜನರಿಗೆ ಜಾಮೀನು ಸಾಲ ಹಾಗೂ 9 ಜನರಿಗೆ ಅಡಮಾನ ಸಾಲ ವಿತರಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಸಂಸ್ಥೆ ಬಿಕ್ಕಟ್ಟಿಗೆ ಸಿಲುಕಿತ್ತು. ಆದರೀಗ ಚೇತರಿಕೆ ಹಂತದಲ್ಲಿದೆ. ಒಟ್ಟು ₹ 27.99 ಲಕ್ಷ ನಿವ್ವಳ ಲಾಭಗಳಿಸಿದೆ. ಸಂಸ್ಥೆಯ ಏಳ್ಗೆಗಾಗಿ ಮೀಸಲು ನಿಧಿ, ಶಿಕ್ಷಣ ನಿಧಿ, ಕಟ್ಟಡ ನಿಧಿ, ದೇಣಿಗೆ, ಹೋಕುಬಾಕಿ, ಕ್ಷೇಮನಿಧಿ ಸಂಗ್ರಹಿಸುತ್ತಿದ್ದೇವೆ. ಸದಸ್ಯರಿಗೆ ಶೇ 10ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸೆ.22ರಂದು ಬೆಳಿಗ್ಗೆ 11ಕ್ಕೆ ಬಂಟರ ಭವನದಲ್ಲಿ ಸಂಘದ ಸರ್ವ ಸದಸ್ಯರ ಸಭೆ ಹಮ್ಮಿಕೊಳ್ಳಲಾಗಿದೆ. ಷೇರುದಾರ ಸದಸ್ಯರು ಸಭೆಗೆ ಸಕಾಲಕ್ಕೆ ಆಗಮಿಸಬೇಕು ಎಂದು ಅವರು ಕೋರಿದರು.
ಉಪಾಧ್ಯಕ್ಷ ಚಿಡುವ ಮಂಜುನಾಥ್, ನಿರ್ದೇಶಕರಾದ ಡಿ.ಲಕ್ಷ್ಮಣ್, ವಿಶಾಲ್ ಕುಮಾರ್, ಕೆ.ಈಶ್ವರ್ ನಾಯ್ಕ್, ಕೆ.ಎಸ್. ನಾರಾಯಣಮೂರ್ತಿ, ಎಂ. ದಿನೇಶ್, ಕಾರ್ಯದರ್ಶಿ ಸೌಖ್ಯ ಎಚ್.ವೈ., ಸಹಾಯಕಿ ಅನನ್ಯ ಅಶೋಕ್ ಇದ್ದರು.