ಶಿವಮೊಗ್ಗ: ದೀಪಾವಳಿ ಹಬ್ಬದ ಅಂಗವಾಗಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅ. 20ರಿಂದ 26ರವರೆಗೆ ಮಲೆನಾಡು ವಸ್ತ್ರವೈಭವ ಕುರಿತ ಜಿಲ್ಲಾಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಕೈಮಗ್ಗ ನೇಕಾರ ಸಹಕಾರ ಸಂಘಗಳು ತಾವು ಉತ್ಪಾದಿಸಿದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿಕೊಳ್ಳಲು ಈ ಮೇಳದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ.
ಕೇಂದ್ರ ಸರ್ಕಾರದ ಜಿಲ್ಲಾಮಟ್ಟದ ಉತ್ಸವಗಳ ಯೋಜನೆಯಡಿಯಲ್ಲಿ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಹಾಗೂ ಕರ್ನಾಟಕ ಸರ್ಕಾರ ಕೈಮಗ್ಗ ಮತ್ತು ಜವಳಿ ಇಲಾಖೆ ಬೆಂಗಳೂರು -ಇವರ ಸಂಯುಕ್ತ ಆಶ್ರಯದಲ್ಲಿ ಸಹಾಯಕ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯ್ತಿ ಅವರ ವತಿಯಿಂದ ಈ ವಸ್ತು ಪ್ರದರ್ಶನ ಮೇಳ ಆಯೋಜಿಸಿದೆ.
ರೇಷ್ಮೆ, ಕಾಟನ್, ಕಾಂಚಿಪುರಂ, ಮೊಣಕಾಲ್ಮುರು ಸೀರೆಗಳು, ಟವಲ್, ಬೆಡ್ಶೀಟ್, ಲುಂಗಿ, ಕಂಚಿಕಾಟನ್ ಸೀರೆ ಇನ್ನು ಮುಂತಾದ ನಿತ್ಯಬಳಕೆಯ ಗೃಹ ಉಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಈ ಅವಧಿಯಲ್ಲಿ ಗ್ರಾಹಕರು ಕೊಳ್ಳುವ ವಸ್ತುಗಳ ಮೇಲೆ ರಾಜ್ಯ ಸರ್ಕಾರದ ವಿಶೇಷ ಶೇ. 20 ರಿಯಾಯ್ತಿ ನೀಡಲಿದೆ. ಜಿಲ್ಲೆಯ ಗ್ರಾಹಕರು ಈ ವಿಶೇಷ ರಿಯಾಯ್ತಿಯ ಉಪಯೋಗ ಪಡೆದುಕೊಳ್ಳುವಂತೆ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.