ಶಿವಮೊಗ್ಗ: ಒಂದು ವರ್ಷದಿಂದ ಚರಂಡಿಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶವನ್ನು ತೆಗೆಯಲು ಹೊರಗುತ್ತಿಗೆ ನೌಕರರು ಹಿಂದೇಟು ಹಾಕಿದರೂ ಇಲ್ಲಿನ ಅಬ್ಬಲಗೆರೆ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಸೋಮವಾರ ತಾವೇ ಚರಂಡಿಗೆ ಇಳಿದು ಸಚ್ಛತಾ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ.
1,300 ಜನಸಂಖ್ಯೆ ಇರುವ ಶಿವಮೊಗ್ಗ ನಗರದ ಸೆರಗಿನ ಗ್ರಾಮಅಬ್ಬಲೆಗೆರೆ. ಅಲಮೇಲು ಅವರು ಆರು ತಿಂಗಳ ಹಿಂದೆ ನಡೆದ ಅಬ್ಬಲಗೆರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಗ್ರಾಮದ ಚರಂಡಿಗಳ ಕೊಳಚೆ ತೆಗೆಸುವಂತೆ ಹಿಂದಿನ ಆಡಳಿತ ಮಂಡಳಿಗೆ ಅವರು ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ತಾವು ಸದಸ್ಯರಾಗಿ ಆಯ್ಕೆಯಾದ ನಂತರ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು.
ಗ್ರಾಮ ಪಂಚಾಯಿತಿಯ ನಿಧಿಯಲ್ಲಿ ಸ್ವಚ್ಛತೆಗಾಗಿ ಈಚೆಗೆ ಪ್ರತಿ ಗ್ರಾಮಕ್ಕೂ ತಲಾ ₹ 50 ಸಾವಿರ ನೀಡಲಾಗಿತ್ತು. ಈ ಹಣದಲ್ಲಿ ಗ್ರಾಮದ ಚರಂಡಿಗಳ ಕಲ್ಮಶ ತೆಗೆಯಲು ಹೊರಗುತ್ತಿಗೆ ನೀಡಲಾಗಿತ್ತು.
ಸೋಮವಾರ ಅಬ್ಬಲಗೆರೆ ಗ್ರಾಮಕ್ಕೆ ಬಂದ ಆರು ಪೌರಕಾರ್ಮಿಕರು ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿದ್ದ ಕಲ್ಮಶ ತೆಗೆಯಲು ನಿರಾಕರಿಸಿದರು.
ಇದರಿಂದ ಅಸಮಾಧಾನಗೊಂಡ ಅಲಮೇಲು ತಾವೇ ಸಲಿಕೆ, ಬಕೆಟ್ ಹಿಡಿದು ಚರಂಡಿಗೆ ಇಳಿದರು. ಒಂದು ಬೀದಿಯನ್ನು ಸ್ವಚ್ಛಗೊಳಿಸಿದರು. ಇದರಿಂದ ಸ್ಫೂರ್ತಿ ಪಡೆದ ಪೌರಕಾರ್ಮಿಕರು, ಗ್ರಾಮಸ್ಥರು ಅವರಿಗೆ ಸಾಥ್ ನೀಡಿದರು. ಅವರ ನಿರ್ಧಾರ ಸ್ವಚ್ಛತಾ ಆಂದೋಲನವಾಗಿ ರೂಪುಗೊಂಡು ಯಶಸ್ಸು ಕಂಡಿದೆ.
‘ನಮಗೆ ಒಂದು ಎಕರೆ ಭೂಮಿ ಇದೆ. ಅದರಲ್ಲೇ ಜೀವನ ಸಾಗಿಸುತ್ತಿದ್ದೇವೆ. ಈಚೆಗೆ ಜನರ ಆಶೀರ್ವಾದದಿಂದ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿರುವೆ.
ಜನರ ಕೆಲಸ ಮಾಡಲು ಹಿಂಜರಿಕೆ ಏಕೆ? ಗ್ರಾಮ ಸದಾ ಸ್ವಚ್ಛವಾಗಿರಬೇಕು ಎನ್ನುವುದು ನನ್ನ ಬಯಕೆ. ಈ ನಿರ್ಧಾರ ಎಲ್ಲರಿಗೂ
ಮಾದರಿಯಾಗಿದ್ದು ಸಂತಸ ತಂದಿದೆ’ ಎಂದು ಅಲಮೇಲು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಉತ್ತಮ ಕೂಲಿ ನೀಡಿದರೂ ಗ್ರಾಮಗಳಲ್ಲಿ ಸಚ್ಛತಾ ಕಾರ್ಯಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ಕರ ಸಂಗ್ರಹದ ಹಣವನ್ನು ಸ್ವಚ್ಛತಾ ಕಾರ್ಯಕ್ಕೆ ನೀಡಲಾಗಿದೆ. ಹೊರಗುತ್ತಿಗೆ ಪಡೆದವರು ನಗರ ಪ್ರದೇಶಗಳಿಂದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುತ್ತಾರೆ. ಅಲಮೇಲು ಅವರ ಕಾರ್ಯ ಎಲ್ಲರಿಗೂ ಮಾದರಿ. ಅವರನ್ನು ಪಂಚಾಯಿತಿ ಆಡಳಿತ ಅಭಿನಂದಿಸುತ್ತದೆ’ ಎಂದು ಅಬ್ಬಲಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೇಮಾ ಶ್ಲಾಘಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.