ತೀರ್ಥಹಳ್ಳಿ: ಅಧಿಕಾರದ ಆಸೆಗೆ ಬಿದ್ದಿರುವ ಕಾಂಗ್ರೆಸ್ ಸರ್ಕಾರವು ಪುಕ್ಕಟೆ ಯೋಜನೆಗಳನ್ನು ಘೋಷಿಸಿ ಖಜಾನೆ ಖಾಲಿ ಮಾಡಿದೆ. ಬಿಜೆಪಿ ಅವಧಿಯಲ್ಲಿ ಕ್ಷೇತ್ರಕ್ಕೆ ಮಂಜೂರಾಗಿದ್ದ ₹200 ಕೋಟಿಗೂ ಹೆಚ್ಚಿನ ವೆಚ್ಚದ ಕಾಮಗಾರಿಗಳು ರದ್ದಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರೋಧಿ ನೀತಿ ಖಂಡಿಸಿ ಬಿಜೆಪಿ ವತಿಯಿಂದ ತಾಲ್ಲೂಕು ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
‘ಉಚಿತ ಭಾಗ್ಯಗಳಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಅಳಲು ಕೇಳಲು ಸರ್ಕಾರ ವಿಫಲವಾಗಿದೆ. ಅಡಿಕೆ ಸುಲಿಯುವ ಯಂತ್ರ ಬಳಸುವ ಬೆಳೆಗಾರರು ಹೆಚ್ಚುವರಿ ವಿದ್ಯುತ್ ಬಿಲ್ ಪಾವತಿಸಬೇಕಾಗಿದೆ. ಪವರ್ ಕಟ್ನಿಂದಾಗಿ 200 ಯುನಿಟ್ ಪುಕ್ಕಟೆ ವಿದ್ಯುತ್ ಬಳಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ನೀಡಿದ ಭರವಸೆ ಇದೇನಾ’ ಎಂದು ಕಿಡಿಕಾರಿದರು.
‘ಕಾಂಗ್ರೆಸ್ನ ಭ್ರಷ್ಟ ಆಡಳಿತಕ್ಕೆ ಜನ ನಲುಗಿದ್ದಾರೆ. ದೇಶದ ಪ್ರಧಾನಿ ಇಸ್ರೇಲ್ ಬೆಂಬಲಿಸಿದರೆ, ರಾಜ್ಯ ಸರ್ಕಾರವು ಹಮಾಸ್ ಪರವಾಗಿ ನಿಲ್ಲುತ್ತದೆ. ಕೋಮುವಾದಿಗಳಿಂದ ರಾಜ್ಯ ಅಭದ್ರತೆಯತ್ತ ಸಾಗುತ್ತಿದೆ. ಪೈಗಂಬರರ ಜನ್ಮದಿನಕ್ಕೂ ಟಿಪ್ಪು, ಔರಂಗಜೇಬನಿಗೂ ಏನು ಸಂಬಂಧ’ ಎಂದು ಆರಗ ಪ್ರಶ್ನಿಸಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಮೇಗರವಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆದ್ದೂರು ನವೀನ್ ಮುಖಂಡರಾದ ಆರ್. ಮದನ್, ಅಶೋಕ್ ಮೂರ್ತಿ, ಕಾಸರವಳ್ಳಿ ಶ್ರೀನಿವಾಸ್, ಸಾಲೇಕೊಪ್ಪ ರಾಮಚಂದ್ರ ಪ್ರತಿಭಟನೆಯಲ್ಲಿ ಇದ್ದರು.