ಭದ್ರಾವತಿ: ಕೆಂಡದಂತಹ ಬಿಸಿಲ ಝಳದಿಂದ ಬಳಲಿದ್ದ ನಗರದ ಜನತೆಗೆ ಬುಧವಾರ ಸಂಜೆ ಸುರಿದ ಈ ವರ್ಷದ ಮೊದಲ ಮಳೆ ತಂಪೆರೆಯಿತು. 20 ನಿಮಷಗಳ ಕಾಲ ಸುರಿದ ಮಳೆಯಿಂದಾಗಿ ತಣ್ಣನೆಯ ಗಾಳಿ ಬೀಸಿ ಮೈ–ಮನಗಳನ್ನು ಮುದಗೊಳಿಸಿತು.
ಬೆಳಿಗ್ಗೆಯಿಂದ ಬಿಸಿಲ ಝಳ ಹೆಚ್ಚಿದ್ದು, ಹೊತ್ತು ಏರುತ್ತಿದ್ದಂತೆಯೇ ಗಾಳಿ–ಧೂಳು, ಗುಡುಗಿನೊಂದಿಗೆ ಪ್ರತ್ಯಕ್ಷನಾದ ಮಳೆರಾಯ ಬಂದಷ್ಟೇ ವೇಗವಾಗಿ ಮರೆಯಾದ. ಯುಗಾದಿಯ ಆಸುಪಾಸಿನಲ್ಲಿ ಮಳೆ ಸುರಿಯಬಹುದು ಎಂಬ ಸ್ಥಳೀಯರ ನಿರೀಕ್ಷೆ ಹುಸಿಯಾಗಲಿಲ್ಲ.
ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲೂ ಮಳೆ ಸುರಿದ ವರದಿಯಾಗಿದೆ.
ಯುಗಾದಿ ಪೂರ್ವ ಪೂರ್ವ ಮಳೆ ಶುಭಸೂಚಕ. ಈ ಬಾರಿ ಮಳೆಗಾಲ ಸಮೃದ್ಧಿಯಾಗಬಹುದು. ಬಾಯಾರಿದ ಹೊಲ–ಗದ್ದೆ, ತೋಟಗಳು, ಜನ–ಜಾನುವಾರು, ಪ್ರಾಣಿ ಪಕ್ಷಿಗಳಿಗೆ ನೆಮ್ಮದಿ ತರಲಿದೆ ಎಂದು ನಗರದ ಜನರು ಮಾತನಾಡಿಕೊಂಡರು.
ದಾವಣಗೆರೆ ವರದಿ: ದಾವಣಗೆರೆ ತಾಲ್ಲೂಕಿನ ಆನಗೋಡು, ಮಾಯಕೊಂಡ ಹೋಬಳಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಿದೆ. ಬಿರುಗಾಳಿಗೆ ಕೊಡಗನೂರು ಕ್ರಾಸ್ ಬಳಿ ಮರವೊಂದು ಬಿದ್ದಿದ್ದು, ಕೆಲ ಕಾಲ ಸಂಚಾರಕ್ಕೆ ಅಡ್ಡಿಯಾಯಿತು. ಹೆಬ್ಬಾಳು ಬಳಿಯೂ ಮಳೆ ಸುರಿದಿದೆ.