ಶಿಕಾರಿಪುರ: ‘ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಿ ದೇವಸ್ಥಾನಕ್ಕೆ ಹಾನಿ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ರೇಣುಕಾಂಬ ದೇವಿ ಭಕ್ತರು ತಹಶೀಲ್ದಾರ್ ಮಲ್ಲೇಶಪ್ಪ ಬೀರಪ್ಪ ಪೂಜಾರ್ ಅವರಿಗೆ ಮನವಿ ಸಲ್ಲಿಸಿದರು.
‘ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನವು ಪುರಾಣ ಪ್ರಸಿದ್ಧವಾಗಿದ್ದು, ನಾಡಿನಾದ್ಯಂತ ಭಕ್ತ ಸಮೂಹ ಹೊಂದಿದೆ. ದೇವಸ್ಥಾನವು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿರುತ್ತದೆ. ಆದರೆ, ಆಗಸ್ಟ್ 2ರಂದು ರಾತ್ರಿ ಕೆಲವು ಕಿಡಿಗೇಡಿಗಳು ದೇವಸ್ಥಾನದ ಗರ್ಭಗುಡಿಗೆ ಅಕ್ರಮವಾಗಿ ಪ್ರವೇಶಿಸಿ ದೇವಿಯ ಮೂರ್ತಿಯನ್ನು ಕಿತ್ತೆಸೆದು ಪೂಜಾ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಭಕ್ತರಲ್ಲಿ ನೋವು ತಂದಿದೆ. ದೇವಸ್ಥಾನ ಹಾನಿ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು’ ಎಂದು ಭಕ್ತರಾದ ಬಿ.ಸಿ. ವೇಣುಗೋಪಾಲ್ ಒತ್ತಾಯಿಸಿದರು.