ಶಿವಮೊಗ್ಗ: ಎಲ್ಲ ಧರ್ಮದವರಲ್ಲೂ ಸ್ವಾಭಿಮಾನದಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್ ಹೇಳಿದರು.
ಮುಸ್ಲಿಂ ಹಾಸ್ಟೆಲ್ ಸಭಾಂಗಣದಲ್ಲಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಮೌಲಾನಾ ಅಬುಲ್ ಕಲಂ ಆಜಾದ್ ದಿನಾಚರಣೆ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಅಪಸ್ವರಗಳು ಕೇಳಿಬರುತ್ತಿವೆ. ಎಲ್ಲ ಧರ್ಮದ ಬಡವರು ಸ್ವಾಭಿಮಾನದಿಂದ ಬದುಕುವಂತೆ ಆದಾಗ ಮಾತ್ರ ಆ ದೇಶ ಸುಸಂಸ್ಕೃತ ದೇಶವಾಗುತ್ತದೆ. ಶಿಕ್ಷಣಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ದುಷ್ಟ ಶಕ್ತಿಗಳನ್ನು ಓಡಿಸಲು ಸಾಧ್ಯ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಆಶಯ ಕೂಡ ಇದೇ ಆಗಿತ್ತು ಎಂದರು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ‘ವಿದ್ಯೆ ಕಾಯಂ ಆಸ್ತಿ. ಇದು ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗಬೇಕು. ಎಲ್ಲ ಶಿಕ್ಷಣ ವಂಚಿತರಿಗೂ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಸಾಮಾಜಿಕ ನ್ಯಾಯ ಪಡೆಯಲು ಶಿಕ್ಷಣ ಬೇಕೇ ಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುವ ಹಲವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಮೊಹಮ್ಮದ್ ನಿಹಾಲ್, ಎನ್ಎಸ್ಯುಐನ ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಮಾಜಿ ಪಾಲಿಕೆ ಸದಸ್ಯ ಆಸೀಫ್, ಅಫ್ತಾಬ್, ಸನಾವುಲ್ಲಾ ಖಾನ್ ಇದ್ದರು.