ರಿಪ್ಪನ್ಪೇಟೆ: ಸಮೀಪದ ಬಸವಾಪುರ ಗ್ರಾಮದ ಬಳಿ ಕಾಡಂಚಿನಲ್ಲಿ ದರಗೆಲೆ ತರಲು ಹೋಗಿದ್ದ ವ್ಯಕ್ತಿಯೊಬ್ಬರು ಆನೆ ತುಳಿದು ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಗ್ರಾಮದ ನಿವಾಸಿ, ಕೃಷಿ ಕಾರ್ಮಿಕ ತಿಮ್ಮಪ್ಪ ಮಡಿವಾಳ (54) ಮೃತ ವ್ಯಕ್ತಿ.
ದರಗೆಲೆ ಒಟ್ಟುಗೂಡಿಸುತ್ತಿದ್ದಾಗ ಹಿಂದಿನಿಂದ ಬಂದ ಆನೆ ಬೆನ್ನಟ್ಟಿ ತುಳಿಯಿತು ಎಂದು ತಿಮ್ಮಪ್ಪ ಜೊತೆಗೆ ಹೋಗಿದ್ದ ನಾಲ್ವರು ಮಹಿಳೆಯರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆನೆ ಮತ್ತೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಕಾವಲು ಕಾಯುತ್ತಿದ್ದಾರೆ. ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮಕ್ಕೆ ಭೇಟಿ ನೀಡಿ ಮೃತನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ₹ 1 ಲಕ್ಷ ಧನಸಹಾಯ ಮಾಡಿದರು. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.