ಸಾಗರ: ಇತಿಹಾಸದ ಅಧ್ಯಯನವು ನಮ್ಮ ಅರಿವಿನ ವಿಸ್ತರಣೆಗೆ ನೆರವು ನೀಡುತ್ತದೆ ಎಂದು ಶಿವಮೊಗ್ಗದ ಡಯಟ್ ಪ್ರಾಂಶುಪಾಲ ವೀರಭದ್ರಪ್ಪ ಹೇಳಿದರು.
ತಾಲ್ಲೂಕಿನ ಕೆಳದಿ ಗ್ರಾಮದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕುವೆಂಪು ವಿವಿ, ಕೆಳದಿ ವಸ್ತು ಸಂಗ್ರಹಾಲಯ, ಸಂಸ್ಕಾರ ಭಾರತಿ, ಕೆಳದಿ ರಿಸರ್ಚ್ ಫೌಂಡೇಷನ್ ಆಶ್ರಯದಲ್ಲಿ ಸೋಮವಾರ ಆರಂಭಗೊಂಡ ಐದು ದಿನಗಳ ಮೋಡಿ ಮತ್ತು ತಿಗಳಾರಿ ಲಿಪಿ ಓದುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ ಇತಿಹಾಸದ ಆಳವಾದ ಅಧ್ಯಯನದ ಕುರಿತು ಆಸಕ್ತಿ ಇರಬೇಕು. ಕಲಿಕೆಯ ವಿಷಯದಲ್ಲಿ ಮುಕ್ತಾಯ ಎನ್ನುವುದೇ ಇಲ್ಲ. ಮೋಡಿ ಮತ್ತು ತಿಗಳಾರಿ ಲಿಪಿಯ ಪರಿಚಯವಿದ್ದರೆ ಇತಿಹಾಸದ ಕುರಿತ ಅಧ್ಯಯನಕ್ಕೆ ನೆರವಾಗುತ್ತದೆ. ಜೊತೆಗೆ ಹೊಸ ವಿಷಯಗಳ ಅನ್ವೇಷಣೆಗೂ ಅದು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಇತಿಹಾಸ ತಜ್ಞ ಡಾ.ಕೆಳದಿ ಗುಂಡಾ ಜೋಯಿಸ್, ‘ಯುವಪೀಳಿಗೆ ಮೋಡಿ, ತಿಗಳಾರಿ ಲಿಪಿ ಅಧ್ಯಯನದತ್ತ ಆಸಕ್ತಿ ಬೆಳೆಸಿಕೊಂಡರೆ ಇತಿಹಾಸಕ್ಕೆ ಸಂಬಂಧಪಟ್ಟ ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯ’ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಹಾಜರಿದ್ದರು. ಶೈಲಜಾ ಪ್ರಾರ್ಥಿಸಿದರು. ಡಾ.ರವಿಪ್ರಸಾದ್ ಜಿ.ವಿ. ಸ್ವಾಗತಿಸಿದರು. ಡಾ.ಕೆಳದಿ ವೆಂಕಟೇಶ್ ಜೋಯಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.