ಭದ್ರಾವತಿ: ‘ವಿಐಎಸ್ಎಲ್ ಕಾರ್ಖಾನೆ ಮತ್ತು ಎಂಪಿಎಂ ಕಾರ್ಖಾನೆ ಪುನರ್ ಆರಂಭಕ್ಕೆ ಪ್ರಯತ್ನಿಸುವುದು ಬಿಜೆಪಿಯ ನಿರ್ಣಯ. ಒಂದು ವೇಳೆ ಸಾಧ್ಯವಾಗದೆ ಇದ್ದರೆ ಕಾರ್ಮಿಕರ ಹಿತ ಕಾಪಾಡುವುದು ಪಕ್ಷದ ನಿರ್ಧಾರವೂ ಹೌದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ನಗರದಲ್ಲಿ ನಾಳೆ ಕಾರ್ಯಕಾರಿಣಿ ನಡೆಯಲಿದೆ. ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆ ಕುರಿತು ಪಕ್ಷದ ಹಿರಿಯರ ಜೊತೆಗೂ ಚರ್ಚಿಸಲಾಗಿದೆ. ಸಂಸದರೂ ಈ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಯಾರಾದರೂ ಅನಗತ್ಯವಾಗಿ ಭದ್ರಾವತಿಯ ಕಾರ್ಖಾನೆಗಳ ಬಗ್ಗೆ ಚರ್ಚೆಗೆ ಎಳೆದರೆ ಕಾರ್ಯಕರ್ತರು ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ’ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಪ್ರಕೋಷ್ಠಗಳ ಅಧ್ಯಕ್ಷ ಭಾನುಪ್ರಕಾಶ್, ಮಹಾನಗರ ಪಾಲಿಕೆ ಸದಸ್ಯ ಚನ್ನಬಸಪ್ಪ ಇದ್ದರು.