ಹೊಳೆಹೊನ್ನೂರು: ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ. ಸರ್ಕಾರಗಳ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷ ನಿರ್ವಹಿಸುತ್ತಿದೆ ಎಂದು ಮಾಜಿ ಸಂಸದ ಧ್ರುವ ನಾರಾಯಣ್ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿನದಿಂದ ದಿನಕ್ಕೆ ಕೊರೊನಾ ಸೋಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬಗ್ಗೆ ಗಮನವೇ ಇಲ್ಲದಂತೆ ಸರ್ಕಾರ ವರ್ತಿಸುತ್ತಿದೆ. ಆರಂಭದಲ್ಲೇ ಇದನ್ನು ಮಟ್ಟಹಾಕುವ ಕೆಲಸ ಮಾಡಬಹುದಿತ್ತು. ರಾಜ್ಯದಲ್ಲಿ ಯಾರು ಆರೋಗ್ಯ ಸಚಿವರು ಎಂಬುದೇ ಸರ್ಕಾರದ ಮಟ್ಟದಲ್ಲಿ ಗೊಂದಲವಿದೆ ಎಂದು ಆರೋಪಿಸಿದರು.
‘ಕೊರೊನಾವನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ದೇಶದಲ್ಲಿಯೇ ಪ್ರಥಮವಾಗಿ ಸೋಂಕು ಕಾಣಿಸಿಕೊಂಡ ಕೇರಳದಲ್ಲಿ ಸಾವಿನ ಸಂಖ್ಯೆ ಕೇವಲ 225 ಇದೆ. ನಮ್ಮ ರಾಜ್ಯದಲ್ಲಿ 6000ಕ್ಕೂ ಅಧಿಕ ಪ್ರಮಾಣದಲ್ಲಿ ಇದೆ. ಕೇರಳ ಸರ್ಕಾರದ ಆರೋಗ್ಯ ಸಚಿವರ ಕಾರ್ಯವೈಖರಿಯನ್ನ ಸುಪ್ರೀಂ ಕೋರ್ಟ್ ಹೊಗಳಿದೆ’ ಎಂದರು.
‘ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ನರೇಗಾ ಯೋಜನೆ ಜಾರಿಗೊಳಿಸಿದ್ದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕರಿಗೆ ಉದ್ಯೋಗ ದೊರೆಯುವಂತಾಯಿತು.ಇಂದಿನ ಪ್ರಧಾನಿ ಮೋದಿ ಮನಕೀ ಬಾತ್ ಎಂದು ಯಾವಾಗಲೂ ಮಾತನಾಡುವುದು ಬಿಟ್ಟರೇ ಬೇರೆ ಯಾವುದೇ ಕೆಲಸ ಮಾಡಿಲ್ಲ. ನಿರುದ್ಯೋಗ ಸಮಸ್ಯೆ, ಬಡತನ ನಿವಾರಣೆ ಸೇರಿ ಜನರು ಅನೇಕ ಸಮಸ್ಯೆಗಳನ್ನು ಎದುರುತ್ತಿದ್ದರೂ ಅದರ ಬಗ್ಗೆ ಕಿಚ್ಚಿತ್ತು ಗಮನ ಹರಿಸದೇ ಸಬ್ ಸಾತ್ ಸಬ್ ವಿಕಾಸ್ ಎಂದು ಬಾಯಿಲ್ಲಿ ಮಾತ್ರ ಹೇಳಿಕೊಂಡು ತಿರುಗಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರದಿಂದ ರಾಜ್ಯಕ್ಕೆ ₹ 13,620 ಕೋಟಿ ತೆರಿಗೆ ಹಣ ಬರಬೇಕಾಗಿದೆ. ಇದರ ಬದಲು ರಾಜ್ಯ ಸರ್ಕಾರ ಸಾಲ ತೆಗೆದುಕೊಳ್ಳುತ್ತಿದೆ. ರಾಜ್ಯದ ಸಂಸದರು, ಮುಖ್ಯಮಂತ್ರಿ ಮೌನವಾಗಿದ್ದಾರೆ ಎಂದು ದೂರಿದರು.
ಡಾ. ಶ್ರೀನಿವಾಸ್ ಕರಿಯಣ್ಣ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು.ಮಾಜಿ ಸಂಸದ ಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸುಂದರೇಶ್, ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಸಿ. ಹನುಮಂತು, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಖಾ ಉಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ತಿಪ್ಪೇಶಪ್ಪ, ನಾಗರಾಜ್, ಶ್ರೀನಿವಾಸ್, ಉಮೇಶ್, ಸೀತಾರಾಂ, ಶಿವರಾಜ್, ಕಗ್ಗಿ ಮಲ್ಲೇಶ್, ಕೇಶವ ಲತಾ ಮಂಜುನಾಥ, ಹೆಚ್.ಎನ್. ನಾಗರಾಜ್, ನಾಗರಾಜ್ ಗೌಡ, ನಾಗೇಶ್ ಡಾ. ರಾಘವೇಂದ್ರ, ಡಾ. ಪ್ರದೀಪ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.