ಹೊಳೆಹೊನ್ನೂರು: ಸಮೀಪದ ಹಾರೋಬೆನವಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಿವೇಶನ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆ ಸಂಬಂಧ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮ ಸಹಜ ಸ್ಥಿತಿಗೆ ಮರಳಿದೆ.
ನಿವೇಶನ ಹಂಚಿಕೆ ಸಂಬಂಧ ರಸೂಲ್ ಹಾಗೂ ರಾಕೇಶ್ ಎಂಬುವವರು ಮಧ್ಯೆ ಜಗಳವಿತ್ತು. ಈ ವಿಚಾರ ಸಂಬಂಧ ರಸೂಲ್ ಗುಂಪಿನೊಂದಿಗೆ ಬಂದು ಹಲ್ಲೆ ನಡೆಸಿದ್ದ ಎಂದು ದೂರು ದಾಖಲಾಗಿತ್ತು.
‘ನನ್ನ ನಿವೇಶನದಲ್ಲಿ ರಸೂಲ್ ಎರಡು ತಿಂಗಳಿಂದ ಶೆಡ್ ನಿರ್ಮಿಸಿದ್ದ. ಇದನ್ನು ತೆರವು ಮಾಡುವಂತೆ ಹಲವು ಬಾರಿ ತಿಳಿಸಿದ್ದರೂ ತೆರವು ಮಾಡಿರಲಿಲ್ಲ.ಶುಕ್ರವಾರ ಶೆಡ್ ಒಂದು ಕಂಬ ತೆಗೆದಿದ್ದೆ. ಸಂಜೆ 8 ರಿಂದ 10 ಯುವಕರ ಗುಂಪಿನೊಂದಿಗೆ ಬಂದ ರಸೂಲ್ ಹಲ್ಲೆ ನಡೆಸಿದ್ದ’ ಎಂದು ರಾಕೇಶ್ ದೂರು ನೀಡಿದ್ದರು.
ರಾಕೇಶ್ ಕೂಡ ಗುಂಪಿನೊಂದಿಗೆ ಬಂದು ರಸೂಲ್ ಮೇಲೆ ಹಲ್ಲೆಗೆ ಮುಂದಾಗಿದ್ದ. ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು.
ಸಿಪಿಐ ಲಕ್ಷ್ಮೀಪತಿ ನೇತೃತ್ವದ ತಂಡ 8 ಜನರನ್ನು ವಶಕ್ಕೆ ಪಡೆದಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥನ್ ಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.