ಶಿವಮೊಗ್ಗ: ‘ಸಮಾಜದ ಒಳಿತಿಗೆ, ಉತ್ತಮ ಯುವ ಸಮೂಹ ನಿರ್ಮಾಣಕ್ಕಾಗಿ ಸಲ್ಲಿಸುವ ಸೇವೆ ಅತ್ಯಂತ ಶ್ರೇಷ್ಠವಾದುದು’ ಎಂದು ಹೊಸನಗರದ ಮೂಲೆಗದ್ದೆ ಸದಾಶಿವಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಪೋದಾರ್ ಶಾಲೆಯ ಸಮೀಪ, ಸಮನ್ವಯ ಟ್ರಸ್ಟ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನಿರ್ಮಿಸಿರುವ ‘ಕೆ.ಎ.ದಯಾನಂದ ಐಎಎಸ್ ವಾಚನಾಲಯ’ ಕೇಂದ್ರ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ನಿಸ್ವಾರ್ಥ ಮನೋಭಾವದಿಂದ ಯುವಸಮೂಹದಲ್ಲಿ ಪ್ರೇರಣೆ ತುಂಬುವ ಕಾರ್ಯ ನಡೆಸುತ್ತಿದ್ದು, ಸದೃಢ ಸಮಾಜ ನಿರ್ಮಾಣಕ್ಕಾಗಿ ಅಗತ್ಯವಿರುವ ಯುವ ಶಕ್ತಿಯನ್ನು ಸಿದ್ಧಪಡಿಸುವ ಕಾರ್ಯ ಅಧ್ಯಯನ ಕೇಂದ್ರದಿಂದ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ತಂದೆ ತಾಯಿಯರ ಸೇವೆ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ಇದು ಪುಣ್ಯದ ಕೆಲಸ. ಸಂಕಷ್ಟದಲ್ಲಿ ಇರುವ ಜನರಿಗೆ ನೆರವು ಒದಗಿಸುವ ಕೆಲಸವೂ ಶ್ರೇಷ್ಠ. ಸಮಾಜಕ್ಕಾಗಿಯೇ ದುಡಿಯುವ ಮೂಲಕ ಸಾವಿರಾರು ಜನರಿಗೆ ಪ್ರೇರಣಾ ಶಕ್ತಿಯಾಗಿ ಸಮನ್ವಯ ಟ್ರಸ್ಟ್ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದು ಮೈಸೂರಿನ ಅರ್ಜುನ ಅವಧೂತ ಮಹಾರಾಜ ತಿಳಿಸಿದರು.
ಸಮನ್ವಯ ಟ್ರಸ್ಟ್ನಿಂದ ನಿರ್ಮಾಣ ಮಾಡಿರುವ ನೂತನ ಕಟ್ಟಡದಲ್ಲಿ ಉಚಿತ ವಾಚನಾಲಯ, ಅಲ್ಲಮ ಪ್ರಭು ಜ್ಞಾನ ಮಂದಿರ, ಅತಿಥಿಗೃಹ, ಕುವೆಂಪು ಅಂಗಳ ಹಾಗೂ ಸಮನ್ವಯ ಕಾರ್ಯಾಲಯ ಕೂಡ ಇರಲಿದೆ.
ಗೋಣಿಬೀಡು ಶೀಲಸಂಪಾದನಾ ಮಠದ ಸಿದ್ಧಲಿಂಗ ಸ್ವಾಮೀಜಿ, ಶಿವಮೊಗ್ಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿನಯಾನಂದ ಸರಸ್ವತಿ ಸ್ವಾಮೀಜಿ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ನಟಿ ಪ್ರೇಮಾ ಇದ್ದರು.
ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಕೆ.ಎಂ.ಗಿರಿಜಾದೇವಿ, ಟ್ರಸ್ಟಿ ಎ.ವಿ.ವಿಕ್ರಂ, ನಿರ್ದೇಶಕ ಸಮನ್ವಯ ಕಾಶಿ, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್.ಗೋಪಿನಾಥ್ ಉಪಸ್ಥಿತರಿದ್ದರು.
ಸಂವಾದ ಇಂದು:
ಕೆ.ಎ.ದಯಾನಂದ ಭಾಗಿ ಸಮನ್ವಯದ ನೂತನ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳ ಜತೆ ನವೆಂಬರ್ 26ರ ಬೆಳಿಗ್ಗೆ 11ಕ್ಕೆ ಸಂವಾದ ನಡೆಯಲಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಐಎಎಸ್ ತರಬೇತುದಾರರಾದ ಆಯಿಷಾ ಪರ್ಝಾನ ಅತಿಥಿಗಳಾಗಿ ಭಾಗವಹಿಸುವರು. ಸಂವಾದದಲ್ಲಿ ಭಾಗವಹಿಸಲು ಆಸಕ್ತರು 8792435402 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.