ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಮುಂಗಾರು ಪೂರ್ವ ಮಳೆ: ಸಾಂಕ್ರಾಮಿಕ ರೋಗಗಳ ಆತಂಕ

ನೀರಿನಲ್ಲಿಯೇ ಸೊಳ್ಳೆಗಳ ಸಂತಾನೋತ್ಪತ್ತಿ,15 ದಿನಕ್ಕಿಂತಲೂ ಹೆಚ್ಚಿನ ದಿನ ನೀರು ಸಂಗ್ರಹಿಸುವಂತಿಲ್ಲ
ಮಲ್ಲಪ್ಪ ಸಂಕೀನ್
Published 24 ಮೇ 2024, 6:35 IST
Last Updated 24 ಮೇ 2024, 6:35 IST
ಅಕ್ಷರ ಗಾತ್ರ

ಶಿವಮೊಗ್ಗ: ಮುಂಗಾರು ಪೂರ್ವ ಮಳೆ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಆತಂಕ ಶುರುವಾಗಿದೆ.

ಮಲೇರಿಯಾ, ಚಿಕೂನ್‌ ಗುನ್ಯಾ, ಮೆದುಳು ಜ್ವರ ಹಾಗೂ ಆನೆಕಾಲು ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 210 ಡೆಂಗಿ ಪ್ರಕರಣ, 133 ಚಿಕೂನ್‌ ಗುನ್ಯಾ, ಐದು ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. 

ಈಡಿಸ್‌ ಈಜಿಪ್ಟೆ ಸೊಳ್ಳೆ ಕಚ್ಚುವಿಕೆಯಿಂದ ಡೆಂಗೆ, ಮಲೇರಿಯಾ ಸೇರಿದಂತೆ  ಸಾಂಕ್ರಾಮಿಕ ರೋಗಗಳು ಆವರಿಸಿಕೊಳ್ಳುತ್ತವೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ಚಚ್ಛ ನೀರಿನಲ್ಲಿ ಸಂತಾನಾಭಿವೃದ್ದಿ ಮಾಡುತ್ತವೆ. ಹಗಲು ಹೊತ್ತಿನಲ್ಲಿ ಮನುಷ್ಯರಿಗೆ ಕಚ್ಚುವುದರಿಂದಾಗಿ ಡೆಂಗೆ ಜ್ವರ ಆವರಿಸಿಕೊಳ್ಳುತ್ತದೆ. 

ಇದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತು ಕಾಣಿಸುವುದು. ಡೆಂಗಿ ಜ್ವರದ ಪ್ರಮುಖ ಲಕ್ಷಣಗಳಾಗಿವೆ. 

ಮುನ್ನೆಚ್ಚರಿಕೆ ಕ್ರಮ: ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಬಹಳಷ್ಟು ಎಚ್ಚರಿಕೆ ವಹಿಸುತ್ತಿದ್ದಾರೆ. ಹಳ್ಳಿ ಮತ್ತು ನಗರ ಪ್ರದೇಶದಲ್ಲಿ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.  ಸಿಮೆಂಟ‌್ ತೊಟ್ಟಿ, ಡ್ರಮ್ಮು, ಬ್ಯಾರಲ್‌, ಮಣ್ಣಿನ ಮಡಿಕೆ ಸೇರಿದಂತೆ ಇನ್ನಿತರ ಕಡೆ ನೀರು ಸಂಗ್ರಹ ಮಾಡದಂತೆ ಜಾಗೃತಿ ಮೂಡಿಸುತ್ತಾರೆ. ಆರಂಭದಲ್ಲಿ ಸೊಳ್ಳೆಗಳು ನಿಯಂತ್ರಣ ಆಗದಿದ್ದರೇ ಫಾಗಿಂಗ್‌ ಕೂಡ ಮಾಡಿಸಲು ಇಲಾಖೆ ಮುಂದಾಗಲಿದೆ. 

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಇದಲ್ಲದೇ ಮನೆ ಮನೆಗೆ ತೆರಳಿ ಸಾಂಕ್ರಾಮಿಕ ರೋಗಗಳು ಹರಡುವ ಕುರಿತುಂತೆ ಅವರಿಗೆ ಅರಿವು ಮೂಡಿಸಲಾಗುತ್ತಿದೆ.

ಎರಡು ವಾರಕ್ಕಿಂತಲೂ ಹೆಚ್ಚಿನ ದಿನ ನೀರು ಸಂಗ್ರಹ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ನೀರನ್ನು ಚೆಲ್ಲಿಸುತ್ತಿರುವುದು
ಎರಡು ವಾರಕ್ಕಿಂತಲೂ ಹೆಚ್ಚಿನ ದಿನ ನೀರು ಸಂಗ್ರಹ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ನೀರನ್ನು ಚೆಲ್ಲಿಸುತ್ತಿರುವುದು
ಸಾಂಕ್ರಾಮಿಕ ರೋಗಗಳ ತಡೆಗಟ್ಟಲು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಇಲಾಖೆಯಿಂದಲೂ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ
–ಡಾ. ನಟರಾಜ ಕೆ.ಎಸ್‌., ಜಿಲ್ಲಾ ಆರೋಗ್ಯಾಧಿಕಾರಿ
ಸೊಳ್ಳೆಗಳ ಸಂತಾನೋತ್ಪತ್ತಿ ನೀರಿನಲ್ಲಿಯೇ ಆಗುತ್ತದೆ. ಹೀಗಾಗಿಯೇ ಹೆಚ್ಚು ದಿನಗಳ ಕಾಲ ನೀರು ಯಾವುದೇ ಕಾರಣಕ್ಕೂ ಸಂಗ್ರಹ ಮಾಡಬಾರದು. ಜನರು ಬಹಳ ಎಚ್ಚರಿಕೆ ವಹಿಸಬೇಕು.
–ಡಾ.ಗುಡದಪ್ಪ ಕಸಬಿ, ನೋಡಲ್ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT