ಶಿವಮೊಗ್ಗ: ‘ದೇಹವೆಂಬ ಬಂಡಿಗೆ ವಿವೇಕ ಎಂಬ ಕಡಗೀಲು ಇದ್ದಾಗ ಮಾತ್ರ ಅದು ಸರಿದಾರಿಯಲ್ಲಿ ಹೋಗುತ್ತದೆ’ ಎಂದು ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಶಂಕರಮಠ ರಸ್ತೆಯ ಓಂ ಗಣೇಶ್ ಟ್ರೈಲರ್ಸ್ ಆವರಣದಲ್ಲಿ ಮುರುಘ ರಾಜೇಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್, ಗುರುಬಸವ ಅಧ್ಯಯನ ಪೀಠದಿಂದ ಹಮ್ಮಿಕೊಂಡಿದ್ದ ಶ್ರಾವಣ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಅರಿಷಡ್ವರ್ಗಗಳು ಹಾಗೂ ಪಂಚೇಂದ್ರಿಯಗಳು ನಮ್ಮ ದೇಹವನ್ನು ಅವುಗಳದ್ದೇ ಆದ ದಾರಿಯಲ್ಲಿ ಒಯ್ಯಲು ಪ್ರಯತ್ನಿಸುತ್ತವೆ. ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಉತ್ತಮ ಮಾರ್ಗದಲ್ಲಿ ನಡೆಯಲು ಅಧ್ಯಾತ್ಮ ಚಿಂತನೆ ಅವಶ್ಯಕ. ಅಂತಹ ಚಿಂತನೆಗೆ ಶ್ರಾವಣ ಮಾಸ ಅತ್ಯಂತ ಪ್ರಶಸ್ತವಾಗಿದೆ’ ಎಂದು ಹೇಳಿದರು.
ಇಂದಿನ ಆಧುನಿಕ ಕಾಲದ ಪ್ರಭಾವ ಮತ್ತು ಪ್ರಲೋಭನೆಗಳಿಂದಾಗಿದೇವರು ನೀಡಿರುವ ಚಿಂತನಾ ಶಕ್ತಿ ಮನುಷ್ಯ ಕಳೆದುಕೊಂಡಿದ್ದಾನೆ. ಪರಸ್ಪರ ನಂಬಿಕೆ, ವಿಶ್ವಾಸಗಳು ದೂರವಾಗಿವೆ. ಇಂತಹ ಸಂದರ್ಭದಲ್ಲಿ ಅಧ್ಯಾತ್ಮ ಚಿಂತನೆಗಳ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
‘ಪ್ರಪಂಚಕ್ಕೇ ಬೆಳಕು ಕೊಡಲು ಭಗವಂತನೇ ಅವತಾರವೆತ್ತಿದಸ್ಥಳ ಭಾರತ. ಹೀಗಾಗಿದೇಶದ ಮೇಲೆ ಎಷ್ಟೇ ಆಕ್ರಮಣಗಳು ನಡೆದರೂ ಅವುಗಳನ್ನು ಮೀರಿ ಮತ್ತೆ ಸದೃಢವಾಗಿ ನಿಲ್ಲುವ ಶಕ್ತಿ ನಮ್ಮದು. ಆತ್ಮೋದ್ಧಾರ ಭಗವತ್ ಚಿಂತನೆಗೆ ಶ್ರಾವಣ ಮಾಸ ಅತ್ಯಂತ ಪೂರಕ’ ಎಂದು ಆರ್ಎಸ್ಎಸ್ ದಕ್ಷಿಣ ಪ್ರಾಂತ್ಯ ಸಹ ಕಾರ್ಯವಾಹ ಪಟ್ಟಾಭಿರಾಮ್ ಅಭಿಪ್ರಾಯಪಟ್ಟರು.
ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರಪ್ಪ, ಹೊಳಲೂರು ಲಿಂಗಪ್ಪ, ಭಾಸ್ಕರ ಜಿ. ಕಾಮತ್, ಹರ್ಷ ಬಿ. ಕಾಮತ್, ಪಾಲಿಕೆ ಸದಸ್ಯ ಇ. ವಿಶ್ವಾಸ್ ಇದ್ದರು.