ಸೊರಬ ತಾಲ್ಲೂಕಿನ 1654 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಅದರಲ್ಲಿ ಆನವಟ್ಟಿ ಭಾಗದಲ್ಲೇ 949 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಅಂದಾಜು 2,100 ಟನ್ ಮಾವು ಬರುವ ನಿರೀಕ್ಷೆ ಇದೆ. ಖರೀದಿಗಾರರು ಇಲ್ಲದೆ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.
ಈ ಬಾರಿ ಕೇವಲ ಶೇ 30ರಷ್ಟು ಮಾವಿನ ಫಸಲು ಬಂದಿದೆ. ಲಾಕ್ಡೌನ್ನಿಂದಾಗಿ ವಿದೇಶಗಳಿಗೆ ರಫ್ತು ನಿಷೇಧವಾಗಿರುವುದರಿಂದ ಮಾವು ವ್ಯಾಪಾರಸ್ಥರು ಇದುವರೆಗೂ ಖರೀದಿಗೆ ಮುಂದಾಗಿಲ್ಲ. ಇದು ಮಾವು ಬೆಳೆಗಾರರು ನಷ್ಟಕ್ಕೆ ಸಿಲುಕಲು ಪ್ರಮುಖ ಕಾರಣ.
ಲಾಕ್ಡೌನ್ನಿಂದ ಹಣ್ಣಿನಅಂಗಡಿಗಳು, ಜ್ಯೂಸ್ ಸೆಂಟರ್ಗಳು ಬಂದ್ ಆಗಿವೆ. ಚಿಲ್ಲರೆ ಮಾರಾಟಗಾರರೂ ಮಾವು ಕೊಳ್ಳಲು ಮುಂದೆ ಬರುತ್ತಿಲ್ಲ. ಇನ್ನು ಒಂದು ವಾರಕ್ಕೆ ಎಲ್ಲ ಜಾತಿಯ ಮಾವು ಕಟಾವಿಗೆ ಬರುತ್ತವೆ. ರಾಜ್ಯದಲ್ಲೇ ಮಾರಾಟ ಮಾಡಿದರೆ ಬೆಲೆ ಕಡಿಮೆಯಾಗುತ್ತದೆ. ಬೆಳೆದ ಎಲ್ಲ ಫಸಲಿನ ವ್ಯಾಪಾರ ಆಗುವುದು ಕಷ್ಟ. ಹಾಗಾಗಿ ಶೀಘ್ರ ಮಾವು ಬೆಳೆಗಾರರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಬೆಂಬಲ ಬೆಲೆ ಜೊತೆಗೆ ಸರ್ಕಾರವೇ ಮಾವು ಖರೀದಿಗೆ ಮುಂದಾಗಬೇಕು ಎನ್ನುತ್ತಾರೆ ಮಾವು ಬೆಳೆಗಾರ ಚೌಟಿ ಚಂದ್ರಶೇಖರ್ ಪಾಟೀಲ್.
‘ಈ ವಾರದಲ್ಲೇ ತಾಲ್ಲೂಕಿನಲ್ಲಿ ಅಂದಾಜು 10 ಟನ್ನಷ್ಟು ಮಾವಿನ ಫಸಲು ಕಟಾವಿಗೆ ಬರುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಪ್ರಥಮ ಹಂತವಾಗಿ ಕೆಲವು ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಹಾಪ್ಕಾಮ್ಸ್ಗೆ ಖರೀದಿ ಮಾಡಲು ಅನುಮತಿ ನೀಡಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ತಾಲ್ಲೂಕು ಹಿರಿಯ ಸಹಾಯಕ ನಿರ್ದೇಶಕ ಕೆ. ಸೋಮಶೇಖರ್ ತಿಳಿಸಿದರು.
ರಾಜ್ಯದ ಒಳಗೆ ಮಾವು ಮಾರಾಟ ಮಾಡಲು ಅವಕಾಶವಿದ್ದು, ವ್ಯಾಪಾರಸ್ಥರು ವಾಹನದ ಆರ್ಸಿ ಬುಕ್, ಡಿಎಲ್ ಜೊತೆಗೆ ಮಾವು ಬೆಳೆಗಾರರ ಪಹಣಿ ನೀಡುವುದರ ಮೂಲಕ ಪಾಸ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರೈತರು ಇದರ ಪ್ರಯೋಜನ ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು.