ಶಿವಮೊಗ್ಗ: ನಿವೇಶನದ ಖಾತೆ ಮಾಡಿಕೊಡಲು ₹ 15,000 ಲಂಚ ಪಡೆಯುವ ವೇಳೆ ತಾಲ್ಲೂಕಿನ ಅಬ್ಬಲಗೆರೆ ಗ್ರಾಮ ಪಂಚಾಯಿತಿ ಗ್ರೇಡ್–2 ಕಾರ್ಯದರ್ಶಿ ಟಿ.ಯೋಗೇಶ್ ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶಿವಮೊಗ್ಗದ ನವುಲೆಯ ನಿವಾಸಿ ಬಿ.ಯಶವಂತ ಅವರ ಹೆಸರಲ್ಲಿ ಚನ್ನಮುಂಬಾಪುರದ ಅಕ್ಷರ ಕಾಲೇಜು ಎದುರು 10 ಗುಂಟೆ ಜಾಗ ಇತ್ತು. ಅದರ ಖಾತೆ ಮಾಡಿಸಿಕೊಳ್ಳಲು ಗ್ರಾಮ ಪಂಚಾಯಿತಿಗೆ 6 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೆಲಸ ಆಗಿರಲಿಲ್ಲ.
ಕೆಲಸ ಮಾಡಿಕೊಡಲು ಯೋಗೇಶ್ ₹ 15,000 ಲಂಚ ಕೇಳಿದ್ದರು. ಈ ಕುರಿತು ಯಶವಂತ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯಶವಂತ ಅವರಿಂದ ಲಂಚದ ಹಣ ಪಡೆಯುವಾಗ ದಾಳಿಯ ವೇಳೆ ಯೋಗೇಶ್ ಸಿಕ್ಕಿಬಿದ್ದಿದ್ದು, ಬಂಧಿಸಿ ನ್ಯಾಯಾಂಗ ವಶಕ್ಕೆ ಸಲ್ಲಿಸಲಾಗಿದೆ.