ರಿಪ್ಪನ್ ಪೇಟೆ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಋಣ ತೀರಿಸಲು, ಪುತ್ರಿ ಗೀತಾ ಶಿವರಾಜಕುಮಾರ್ ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ನಿಮ್ಮ ಮೇಲೆ ಇದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಸಮೀಪದ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಮೂರು ಅವಧಿಯಲ್ಲಿ ಗೆಲುವು ಸಾಧಿಸಿದ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಹಾಲಪ್ಪ ಮತ್ತು ಆರಗ ಜ್ಞಾನೇಂದ್ರ ಅವರು ಬಿಟ್ಟಿ ಹಣ ಗಳಿಸಲು ಹೋಗಿ ಮುಳುಗಡೆ ರೈತರನ್ನು ಸರ್ವನಾಶ ಮಾಡಿದ್ದಾರೆ. ಕೇಂದ್ರದಲ್ಲಿ ಅವರದೇ ಸರ್ಕಾರ ಇದ್ದರೂ, ನೊಂದ ರೈತರಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಟೀಕಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಹುಡುಕಲು ಇಂದಿಗೂ ಬೆಟ್ಟ- ಗುಡ್ಡ ಹತ್ತಬೇಕು. ಇದು ಬಿಜೆಪಿಯ ಸಾಧನೆ ಎಂದು ಲೇವಡಿ ಮಾಡಿದರು.
ಚುನಾವಣೆಯಲ್ಲಿ ಮತ ನೀಡಿ ಹರಸಿದಲ್ಲಿ ಜಿಲ್ಲೆಯ ಎಲ್ಲಾ ವರ್ಗದವರ ಪರವಾಗಿ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಭರವಸೆ ನೀಡಿದರು.
ಮಾತು ಆರಂಭಿಸಿದ ನಟ ಶಿವರಾಜಕುಮಾರ್ ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂಬ ಹಾಡಿನ ಸಾಲಿನೊಂದಿಗೆ ಜನರ ಗಮನಸೆಳೆದರು. ಹಳ್ಳಿಗಳ ಒಡನಾಟದೊಂದಿಗೆ ಬೆಳೆದಿರುವ ಶಿವಮೊಗ್ಗದ ಮಗಳು ಗೀತಾ ಅವರನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಜಿಲ್ಲೆಯ ಋಣ ತೀರಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ‘ನಿಮ್ಮ ಕೆಲಸ ಮಾಡಿಸುವ ಹೊಣೆಗಾರಿಕೆ ನನ್ನದು’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ‘ಮಲೆನಾಡಿನಲ್ಲಿ ಹಬ್ಬಕ್ಕೆ ತವರಿಗೆ ಬರುವ ಮನೆಮಗಳಿಗೆ ಉಡಿ ತುಂಬ ರೂಢಿಯಿದೆ. ಈ ಬಾರಿ ಚುನಾವಣೆಯಲ್ಲಿ ಗೀತಾ ಶಿವರಾಜಕುಮಾರ್ ಮನೆಮಗಳಾಗಿ ಬಂದಿದ್ದಾರೆ. ಮತದಾನದ ಉಡಿ ತುಂಬುವ ಮೂಲಕ ಹರಿಸಬೇಕು’ ಎಂದರು.
ತಾಲ್ಲೂಕಿನ ಹಾರೋಹಿತ್ಲು, ಕೆಂಚನಾಳ, ಅರಸಾಳು, ಬಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದರು.
ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಶ್ವೇತ ಬಂಡಿ, ಬಿ.ಪಿ.ರಾಮಚಂದ್ರ ಬಿ.ಜಿ.ಚಂದ್ರ ಮೌಳಿ, ಗವಟೂರು ಗಣಪತಿ, ಬೆಳ್ಳೂರು ಯೋಗೇಶ್, ಪ್ರವೀಣ್ ಲಕ್ಷ್ಮೀಕಾಂತ್, ಮಹೇಂದ್ರ ಬುಕ್ಕೆವರೆ ಹಾಗೂ ಜಿಲ್ಲಾ, ತಾಲ್ಲೂಕು ಮುಖಂಡರು ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.