ಶಿವಮೊಗ್ಗ: ‘ಗ್ರಾಮೀಣಾಭಿವೃದ್ಧಿ ಸಚಿವ ಯಡಿಯೂರಪ್ಪ, ಗೃಹ ಸಚಿವ ಅರಗೇಂದ್ರ ಗಾಂಗ್ರಿ, ವಿಧಾನಪರಿಷತ್ ಸದಸ್ಯ ಐನೂರು ಮಂಜುನಾಥ್, ಪಾಲಿಕೆ ಮೇಯರ್ ಸುಮಿತ್ರ ಅಮ್ಮ ಅಣ್ಣ ಅಪ್ಪ...’
ಇದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಅವರು ಜಿಲ್ಲೆಯ ಗಣ್ಯವ್ಯಕ್ತಿಗಳನ್ನು ಅಭಿನಂದಿಸುವಾಗ ಸಂಬೋಧಿಸಿದ ರೀತಿ.
ನಗರದ ಡಿ.ಆರ್. ಮೈದಾನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಪದಗಳ ಉಚ್ಚರಿಸಲು ತಡವರಿಸಿದ ಸಚಿವರು, ಗಣ್ಯರ ಹೆಸರನ್ನು ತಪ್ಪಾಗಿ ಹೇಳಿ ನಗೆಪಾಟಲಿಗೆ ಈಡಾದರು.
ಸಚಿವ ಈಶ್ವರಪ್ಪ ಬದಲು ಯಡಿಯೂರಪ್ಪ ಅವರ ಹೆಸರು ಹೇಳಿದರು. ಎಲ್ಲ ಬಿಜೆಪಿ ನಾಯಕರು, ಗಣ್ಯರ ಹೆಸರನ್ನು ತಪ್ಪಾಗಿ ಉಚ್ಚರಿಸಿದ ನಾರಾಯಣಗೌಡ ಗಣರಾಜ್ಯೋತ್ಸವ ಎಂಬ ಪದವನ್ನೂ ಹೇಳಲು ಕೂಡ ತಡವರಿಸಿದರು. ಮೇಯರ್ ಸುನಿತಾ ಅಣ್ಣಪ್ಪ ಹೆಸರನ್ನು ‘ಸಮಿತ್ರ ಅಮ್ಮ ಅಣ್ಣ ಅಪ್ಪ’ ಎಂದರು. ಶಿಕ್ಷಣ ಎನ್ನುವುದರ ಬದಲು ‘ಶಿಸ್ಕಣ’ ಎಂದು ತಡವರಿಸಿದರು.