ಶಿವಮೊಗ್ಗ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2021-22ನೇ ಸಾಲಿಗೆ₹ 23.26 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಹೇಳಿದರು.
2022ರಮಾರ್ಚ್ ಅಂತ್ಯಕ್ಕೆ ₹ 1,244.36 ಕೋಟಿ ಠೇವಣಿ ಸಂಗ್ರಹವಾಗಿದೆ. ಇದು ಕೂಡ ದಾಖಲೆಯಾಗಿದೆ. ಎನ್ಪಿಎ ಪ್ರಮಾಣ ಕಡಿಮೆಯಾಗಿದೆ. ಬ್ಯಾಂಕ್ ₹ 2517.36 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದೆ. 89,945 ರೈತರಿಗೆ ₹ 976.33 ಕೋಟಿ ಬೆಳೆ ಸಾಲ ನೀಡಲಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ 99.32 ರಷ್ಟಿದೆ. 387 ರೈತರಿಗೆ₹ 40.43 ಕೋಟಿ ಮಧ್ಯಮಾವಧಿ ಸಾಲ ನೀಡಲಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಬ್ಯಾಂಕ್ನಲ್ಲಿ ಮೈಕ್ರೋ ಎಟಿಎಂ ಸೌಲಭ್ಯ, ಮೊಬೈಲ್ ಬ್ಯಾಂಕಿಂಗ್, ಬಿಬಿಪಿಎಸ್ ಠೇವಣಿ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಏಕರೂಪ ತಂತ್ರಾಂಶದ ಯೋಜನೆ ಅಡಿಯಲ್ಲಿ ಗಣಕೀಕರಣಗೊಳಿಸಲಾಗುವುದು, ಮುಂದಿನ ವರ್ಷ ₹ 30 ಕೋಟಿ ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ ಎಂದರು.
ವಿಲೀನಕ್ಕೆ ವಿರೋಧ: ಡಿಸಿಸಿ ಬ್ಯಾಂಕ್ ಅಪೆಕ್ಸ್ ಬ್ಯಾಂಕ್ ಜತೆ ವಿಲೀನಗೊಳಿಸಬಾರದು. ರಾಜ್ಯದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಿವೆ. ಈ ಎಲ್ಲಾ ಸಹಕಾರ ಸಂಘಗಳ ಮೇಲ್ವಿಚಾರಣೆಯನ್ನು ಡಿಸಿಸಿ ಬ್ಯಾಂಕ್ ನೋಡಿಕೊಳ್ಳುತ್ತದೆ. ಆದರೆ, ಅಪೆಕ್ಸ್ ಬ್ಯಾಂಕ್ಗೆ ವಿಲೀನಮಾಡಿದರೆ ತೊಂದರೆಯಾಗುತ್ತದೆ. ಅಪೆಕ್ಸ್ ಬ್ಯಾಂಕ್ ಇರುವುದು ಬೆಂಗಳೂರಿನಲ್ಲಿ. ವಿವಿಧ ವಿಷಯಗಳಿಗಾಗಿ ಬೀದರ್ನಂತಹ ಜಿಲ್ಲೆಯಿಂದ 800 ಕಿ.ಮೀ. ದೂರದ ಬೆಂಗಳೂರಿಗೆ ಬರುವುದು ಕಷ್ಟವಾಗುತ್ತದೆ. ಆಡಳಿತಾತ್ಮಕ ದೃಷ್ಟಿಯಿಂದಲೂ ಇದು ಅವೈಜ್ಞಾನಿಕ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ, ನಿರ್ದೇಶಕರಾದ ಕೆ.ಪಿ. ದುಗ್ಗಪ್ಪಗೌಡ, ಎಂ.ಎಂ. ಪರಮೇಶ್, ಜೆ.ಪಿ. ಯೋಗೀಶ್, ಎಚ್.ಕೆ.ವೆಂಕಟೇಶ್, ಎಸ್.ಪಿ. ದಿನೇಶ್, ಜಿ.ಎನ್. ಸುಧೀರ್, ಬಿ.ಕೆ. ಗುರುರಾಜ್, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ಡೋಂಗ್ರೆ ಇದ್ದರು.