ಹೊಸನಗರ: ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಬೈಸೆ ಎಂಬಲ್ಲಿ ವ್ಯಕ್ತಿಯೊಬ್ಬರು ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೈಸೆ ಮಿಥುನ್ ಶೆಟ್ಟಿ (20) ಆತ್ಮಹತ್ಯೆಗೆ ಯತ್ನಿಸಿದವರು. ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ಗಳಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿದ್ದ ಆರೋಪದ ಮೇರೆಗೆ ನಗರ ಠಾಣೆ ಪೊಲೀಸರು ಶಾಂತಿ ಭಂಗದ 108 ಪ್ರಕರಣವನ್ನು ಬೈಸೆ ಮಿಥನ್ ಮೇಲೆ ದಾಖಲಿಸಿ ಠಾಣೆಗೆ ಕರೆಸಿ ತನಿಖೆ ನಡೆಸಿದ್ದರು.
ಇದಕ್ಕಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಆರೋಪಿಯ ದೂರು.
‘ನಾವು ಯಾವುದೇ ಕಿರುಕುಳ ನೀಡಿಲ್ಲ. ಬುದ್ದಿವಾದ ಹೇಳಲಾಗಿತ್ತು. ಈಗ ಗಣಪತಿ ಹಾಗೂ ಮೊಹರಂ ಹಬ್ಬದ ಸಮಯ ಆದ್ದರಿಂದ ಸರ್ಕಾರದ ನಿಯಮದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.