ಶಿವಮೊಗ್ಗ: ಒತ್ತುವರಿ ಜಾಗ ತೆರವುಗೊಳಿಸಲು ಆಗ್ರಹಿಸಿ ಪುರಲೆ ಗ್ರಾಮಸ್ಥರು ಶುಕ್ರವಾರ ನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು.
ಪುರಲೆ ಗ್ರಾಮಠಾಣಾ ನಗರಪಾಲಿಕೆ ಸ್ವತ್ತು. ಪ್ರಭಾವಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿವೇಶನ ರಚಿಸುತ್ತಿದ್ದಾರೆ. ಮಾರಾಟ ಮಾಡುತ್ತಿದ್ದಾರೆ. ಈ ಸರ್ವೆ ನಂಬರ್ನಲ್ಲಿ ಬಡವರು ಮತ್ತು ದಲಿತರು ವಾಸವಾಗಿದ್ದರು. ಆಗ ಪಾಲಿಕೆ ಅಧಿಕಾರಿಗಳು ಅವರನ್ನು ಒಕ್ಕಲೆಬ್ಬಿಸಿದ್ದರು. ಆದರೆ, ಈಗ ಅದೇ ಜಾಗ ಕಬಳಿಸಿಕೊಂಡು ಮಾರಾಟ ಮಾಡಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಕಣ್ಣುಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಆರೋಪಿಸಿದರು.
ತಕ್ಷಣವೇ ಅಕ್ರಮ ಒತ್ತುವರಿದಾರರ ವಿರುದ್ಧ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಒತ್ತುವರಿ ಜಾಗ ತೆರವುಗೊಳಿಸಬೇಕು. ಪಾಲಿಕೆ ಸ್ವತ್ತು ಉಳಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ಪಾಲಿಕೆ ವಿರುದ್ಧವೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದು ಎಂದು ಎಚ್ಚರಿಸಿದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್, ಸದಸ್ಯ ರಮೇಶ್ ಹೆಗ್ಡೆ, ಯುವ ಕಾಂಗ್ರೆಸ್ ಮುಖಂಡ ಸಿ.ಜಿ.ಮಧುಸೂದನ್, ಕಾರ್ತಿಕ್, ಗ್ರಾಮದ ಮುಖಂಡರಾದ ನಾಗೇಶಪ್ಪ, ಸಂತೋಷ್, ನಾಗರಾಜ್, ಗುತ್ಯಪ್ಪ, ಲೋಕೇಶ್, ವಿಜಯ್, ಲಕ್ಷ್ಮಮ್ಮ, ಸುಮಾ, ಪ್ರಭಾಕರ್, ಶೋಭಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.