ಶಿವಮೊಗ್ಗ: ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಎಸ್.ಅಮೃತಾ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಪ್ರಮುಖ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಎಂ. ಹೆಗಡೆ ತಿಳಿಸಿದರು.
‘ದೇಶಾದ್ಯಂತ ಇರುವ 4,788 ಸಿಬಿಎಸ್ಇ ಶಾಲೆಯ 8,03,978 ಮಕ್ಕಳು ವೀರ್ಗಾಥಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರಲ್ಲಿ 25 ಮಕ್ಕಳು ಗಣರಾಜ್ಯೋತ್ಸವದ ಪ್ರಮುಖ ಅತಿಥಿ ಗೌರವ ಪಡೆದಿದ್ದಾರೆ. ಅದರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ಎಸ್.ಅಮೃತಾ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ವೀರರ ಸಾಧನೆಗಳನ್ನು ಕುರಿತ ಕವನ ರಚನೆ, ಲೇಖನ ಬರಹ, ಚಿತ್ರಕಲಾ ಸ್ಪರ್ಧೆಯಲ್ಲಿ ಅಮೃತಾ 9–10ನೇ ತರಗತಿ ವಿಭಾಗದ ಚಿತ್ರಕಲಾ ವಿಭಾಗದಲ್ಲಿ ವಿಜೇತರಾಗಿದ್ದರು. ರಕ್ಷಣಾ ಇಲಾಖೆಯು ನೀಡುವ ₹ 10 ಸಾವಿರ ನಗದು ಬಹುಮಾನ ಹಾಗೂ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಮುಖ ಅತಿಥಿಯಾಗಿ ಭಾಗವಹಿಸುವ ಗೌರವ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
‘ಅಮೃತಾ 8 ವರ್ಷಗಳಿಂದ ರವಿವರ್ಮಾ ಚಿತ್ರಕಲಾ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಮುಖ ಅತಿಥಿಯಾಗಿ ರಾಜ್ಯದಿಂದ ನಾಲ್ವರು ಆಯ್ಕೆಯಾಗಿದ್ದು, ಅಮೃತಾ ಆಯ್ಕೆಯಾಗಿರುವುದು ಖುಷಿ ತಂದಿದೆ’ ಎಂದು ಶಾಲೆಯ ತರಬೇತುದಾರ ಶ್ರೀಧರ್ ಕಂಬಾರ್ ಹರ್ಷ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಮೃತಾ ಪೋಷಕರಾದ ಎಂ.ಆರ್. ಶಿವಕುಮಾರ್, ಎಂ.ವಿಜಯಾ, ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ್, ಎಂ.ಆರ್. ಬಸವರಾಜ್, ಎಂ.ಆರ್. ಸುಬ್ರಹ್ಮಣ್ಯ, ರಮೇಶ್ ಇದ್ದರು.