ಶಿಕಾರಿಪುರ: ಬಂಜಾರ ಸಮುದಾಯವನ್ನು ಜಾಗೃತಿಗೊಳಿಸುವ ಕಾರ್ಯವನ್ನು ಸಂತ ಸೇವಾಲಾಲ್ ಮಹಾರಾಜ್ ಮಾಡಿದ್ದರು ಎಂದು ಗೋರ್ ಸೇನಾ ರಾಷ್ಟ್ರೀಯ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರು ಎಸ್. ನಾಯ್ಕ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಬಂಜಾರ ಸಮಾಜ ಆಶ್ರಯದಲ್ಲಿ ನಡೆದ ಸಂತ ಸೇವಾಲಾಲ್ ಮಹಾರಾಜ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಜಾರ ಸಮುದಾಯವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸೇವಾಲಾಲ್ ಮಹಾರಾಜರು ದೇಶದಾದ್ಯಂತ ಸಂಚರಿಸಿದರು. ಮೌಢ್ಯದ ವಿರುದ್ಧ ಸಮುದಾಯದ ಜನರನ್ನು ಜಾಗೃತಗೊಳಿಸುವ ಕಾರ್ಯ ಮಾಡಿದ್ದರು. ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಶಿಕ್ಷಣ ತಜ್ಞ ದೇಮಾಗರು ಅವರನ್ನು ತಾಂಡಾಗಳಿಗೆ ಕರೆದುಕೊಂಡು ಹೋಗಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಶ್ರಮಿಸಿದರು. ನೀರಿನ ಸಂರಕ್ಷಣೆ ಬಗ್ಗೆ ತಿಳಿಸಿದ್ದರು. ಸಂತ ಸೇವಾಲಾಲ್ ಮಹಾರಾಜರ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ತಹಶೀಲ್ದಾರ್ ಮಲ್ಲೇಶಪ್ಪ ಬಿ. ಪೂಜಾರ್ ಸೇವಾಲಾಲ್ ಮಹಾರಾಜ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಪ ತಹಶೀಲ್ದಾರ್ ರವಿಕುಮಾರ್, ತಾಲ್ಲೂಕು ಪಂಚಾಯಿತಿ ಇಒ ರಾಜಣ್ಣ, ಬಂಜಾರ ಸಮಾಜದ ಮುಖಂಡರಾದ ಬಂಗಾರಿನಾಯ್ಕ, ವಿಜಯನಾಯ್ಕ, ಪರಮೇಶ್ವರನಾಯ್ಕ, ಪ್ರೇಮ್ ಕುಮಾರ್ ನಾಯ್ಕ, ರಾಮಚಂದ್ರಪ್ಪ ಉಪಸ್ಥಿತರಿದ್ದರು.