ಸಾಗರ: ಶಸ್ತ್ರ ಹಿಡಿಯದೇ ಶಾಸ್ತ್ರದ ಮೂಲಕವೇ ಧರ್ಮ ಪ್ರತಿಷ್ಠಾಪನೆ ಮಾಡಿದ್ದು ಶಂಕರಾಚಾರ್ಯರ ಹೆಗ್ಗಳಿಕೆ ಎಂದು ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
ಇಲ್ಲಿನ ಶೃಂಗೇರಿ ಶಂಕರ ಮಠದ ಭಾರತೀತೀರ್ಥ ಸಭಾಭವನದಲ್ಲಿ ನವರಾತ್ರಿ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾಲ್ವರು ಸಾಧಕರಿಗೆ ‘ಶಾರದಾ ಪುರಸ್ಕಾರ’ ಪ್ರದಾನ ಮಾಡಿ ಮಾತನಾಡಿದರು.
ಸನಾತನ ಧರ್ಮವನ್ನು ಪ್ರತಿಷ್ಠಾಪಿಸಿ ಅದು ಜನಮಾನಸದಲ್ಲಿ ನೆಲೆಯೂರುವಂತೆ ಮಾಡಿದ ಶ್ರೇಯಸ್ಸು ಶಂಕರಾಚಾರ್ಯರಿಗೆ ಸಲ್ಲುತ್ತದೆ. ಕಾಶ್ಮೀರದಿಂದ ಶಾರದಾ ದೇವಿಯನ್ನು ಶೃಂಗೇರಿಗೆ ತಂದು ಪ್ರತಿಷ್ಠಾಪನೆ ಮಾಡಿ ಧರ್ಮದ ಕೈಂಕರ್ಯ ಕೈಗೊಂಡ ಶಂಕರಾಚಾರ್ಯರ ಕಾರ್ಯ ಸ್ಮರಣೀಯ ಎಂದರು.
ಸಾಹಿತಿ ಎಚ್.ಎಂ. ತಿಮ್ಮಪ್ಪ ಕಲಸಿ, ಎಸ್. ಗಜಾನನ ಜೋಯಿಸ್, ಕಲಾ ಪೋಷಕ ಕಟ್ಟಿನಕೆರೆ ಸುಬ್ರಾವ್, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್. ನಾಗೇಂದ್ರ ಅವರಿಗೆ ‘ಶಾರದಾ ಪ್ರಸಾದ’ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹೊಸಗುಂದದ ಉಮಾಮಹೇಶ್ವರ ಸೇವಾ ಟ್ರಸ್ಟ್ ಮುಖ್ಯಸ್ಥ ಸಿ.ಎಂ.ಎನ್. ಶಾಸ್ತ್ರಿ, ನಗರಸಭೆ ಉಪಾಧ್ಯಕ್ಷ ವಿ. ಮಹೇಶ್, ಸದಸ್ಯ ಬಿ.ಎಚ್. ಲಿಂಗರಾಜ್, ಸುಪ್ರತೀಕ್ ಭಟ್, ಶ್ರೀಧರ್, ಎಸ್.ಕೆ. ಪ್ರಭಾವತಿ ಇದ್ದರು.