ಸೊರಬ: ಸಿದ್ಧಗಂಗಾ ಮಠದ ಲಿಂ. ಶಿವಕುಮಾರ ಸ್ವಾಮೀಜಿ ಅವರು ಸಮಾಜದಲ್ಲಿ ಬಡವ, ಬಲ್ಲಿದರನ್ನು ಸಮಾನವಾಗಿ ಕಾಣುವ ಮೂಲಕ ಸೇವೆಯಲ್ಲಿ ಸಾರ್ಥಕತೆ ಮೆರೆದವರು ಎಂದು ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಶಿವಕುಮಾರ ಸ್ವಾಮೀಜಿ ಜಯಂತಿ ಪ್ರಯುಕ್ತ ನಡೆದ ‘ಬೆಳದಿಂಗಳ ಸಂಜೆಯಲಿ ಬೆಳದಿಂಗಳ ಊಟ’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದ ಶಿವಕುಮಾರ ಸ್ವಾಮೀಜಿ ಅವರು ಸಮಾಜದ ಒಳಿತಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ಆಹಾರ, ಅಕ್ಷರ, ಶಿಕ್ಷಣವನ್ನು ನೀಡುವ ಮೂಲಕ ತ್ರಿವಿಧ ದಾಸೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು’ ಎಂದು ಹೇಳಿದರು.
ವೀರಶೈವ ಸಮಾಜದ ಅಧ್ಯಕ್ಷ ಫಾಲಾಕ್ಷಪ್ಪ ನಿಜಗುಣ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೃತ್ಯುಂಜಯ ಗೌಡ, ಈರೇಶಗೌಡ, ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ಡಿ.ಶಿವಯೋಗಿ, ನಾಗರಾಜ ಗುತ್ತಿ, ಜಯಮಾಲಾ, ಪೂರ್ಣಿಮಾ, ಪುಷ್ಪಾ, ರೇವತಿ, ಸುನಿತಾ, ಅಂಬಿಕಾ, ರೂಪಾ, ವಿನೋದ್ ವಾಲ್ಮೀಕಿ ಇದ್ದರು.