ಶಿವಮೊಗ್ಗ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ವಿರುದ್ಧ ದಾಖಲಾದ ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿ ಮೂಲಕಪ್ರಗತಿಪರ ಸಂಘಟನೆಗಳ ಒಕ್ಕೂಟ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.
ಗುಜರಾತ್ ಗಲಭೆಯಲ್ಲಿ ಮೋದಿ ಬಳಗಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್ಚಿಟ್ ಕೊಟ್ಟ ಕಾರಣ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಆರಂಭಿಸಿದೆ. ಸುಳ್ಳು ಆರೋಪದ ಮೇಲೆ ತೀಸ್ತಾ ಸೆಟಲ್ವಾಡ್ ಅವರನ್ನು ವಿಚಾರಣೆ ಹೆಸರಿನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದು ಘೋರ ಅನ್ಯಾಯ ಹಾಗೂ ಸರ್ವಾಧಿಕಾರಿಯ ದಬ್ಬಾಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಜರಾತ್ ಹತ್ಯಾಕಾಂಡದ ಬಲಿಪಶುಗಳ ಪರವಾಗಿ ನಿರಂತರ ಕಾನೂನು ಹೋರಾಟ ನಡೆಸುತ್ತಾ ಬಂದಿರುವ ತೀಸ್ತಾ ಸೆಟಲ್ವಾಡ್, ದೇಶದ ನ್ಯಾಯಪರತೆಯ ಸಾಕ್ಷಿಪ್ರಜ್ಞೆ ಯಾಗಿದ್ದಾರೆ. ರಾಷ್ಟ್ರಪತಿ ಮಧ್ಯೆ ಪ್ರವೇಶಿಸಿ ತೀಸ್ತಾ ಹಾಗೂ ಇತರರ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆದು ಬಿಡುಗಡೆ ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ.
ನಮ್ಮ ಹಕ್ಕು ವೇದಿಕೆಯ ಕೆ.ಪಿ.ಶ್ರೀಪಾಲ್, ಚಿಂತಕ ಪ್ರೊ.ರಾಜೇಂದ್ರಚೆನ್ನಿ, ಕರ್ನಾಟಕ ಜನಶಕ್ತಿಯ ಅನನ್ಯ ಶಿವು, ವಿಚಾರ ವೇದಿಕೆಯ ಆರ್.ಕುಮಾರ್, ಹುಸೇನ್, ಗಿರೀಶ್ ನಾಯ್ಕ ಬೆಳಲಕಟ್ಟೆ, ಸುರೇಶ್ಅರಸಾಳು, ಮಂಜುನಾಥ ನವುಲೆ ಹಾಜರಿದ್ದರು.