ಭದ್ರಾವತಿ: ಪಡಿತರ ಚೀಟಿ ವಿತರಣೆ ಅವ್ಯವಸ್ಥೆ ಸರಿ ಮಾಡುವಂತೆ ಆಗ್ರಹಿಸಿ ನೂರಾರು ನಾಗರಿಕರು ಗುರುವಾರ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿ ತಹಶೀಲ್ದಾರ್ ಅವರಿಗೆ ಮನವಿ ಅರ್ಪಿಸಿದರು.
ಬೆಳಿಗ್ಗೆ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದ ನಾಗರಿಕರು ಪಡಿತರ ವಿತರಣೆಯಲ್ಲಿನ ಲೋಪದೋಷ ಹಾಗೂ ಗೊಂದಲಗಳ ಸರಿಪಡಿಸುವಿಕೆಗೆ ಒತ್ತಾಯಿಸಿ ಘೋಷಣೆ ಕೂಗಿದರು.
ಈ ಹಂತದಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಯೋಗೇಶ್ವರ್, ಸಾರ್ವಜನಿಕರ ಅಹವಾಲು ಆಲಿಸಿ, ಒಂದಿಷ್ಟು ಸಮಜಾಯಿಷಿ ನೀಡುವ ಯತ್ನಕ್ಕೆ ಮುಂದಾದರು. ಇದಲ್ಲದೇ ತಾತ್ಕಾಲಿಕ ವಿತರಣೆಗಾರರಿಗೂ ಕಾಯಂ ಚೀಟಿ ವಿತರಿಸುವ ಕ್ರಮ ಜರುಗಿಸಲಾಗಿದೆ ಎಂದು ಉತ್ತರಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಚೀಟಿ ವಿತರಣೆ ಕುರಿತಂತೆ ಸಾಕಷ್ಟು ಗೊಂದಲವಿದೆ. ಅದನ್ನು ನಿವಾರಣೆ ಮಾಡುವ ಜತೆಗೆ, ಎಲ್ಲಾ ನಾಗರಿಕರಿಗೂ ಸೌಲಭ್ಯ ನೀಡುವ ಕಡೆ ಅಧಿಕಾರಿಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪಡಿತರ ಚೀಟಿ ಕುರಿತಾದ ಹಲವು ಸಮಸ್ಯೆಗಳ ಇತ್ಯರ್ಥಕ್ಕೆ ಒತ್ತಾಯಿಸುವ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು.