ಶಿರಾಳಕೊಪ್ಪ: ಬೆಳೆ ವಿಮೆ ಹಣವನ್ನು ವಿತರಿಸುವಲ್ಲಿ ವಿಮಾ ಕಂಪೆನಿ ರೈತರಿಗೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಇಲ್ಲಿನ ಸೊರಬ ರಸ್ತೆಯಿಂದ ಬಸ್ನಿಲ್ದಾಣ ಮಾರ್ಗವಾಗಿ ನಾಡಕಚೇರಿಯವರೆಗೆ ರೈತರು ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ‘ಕಳೆದ ಎರಡು ವರ್ಷದಿಂದ ಮಳೆ ಬಾರದೇ ತತ್ತರಿಸುವ ರೈತರಿಗೆ ಪರಿಹಾರ ರೂಪದಲ್ಲಿ ಲಭಿಸಬೇಕಾದ ಬೆಳೆ ವಿಮೆ ಮೊತ್ತ ಸಿಕ್ಕಿಲ್ಲ. ಸತತ ಎರಡನೇ ವರ್ಷ ಕೂಡ ತಾಳಗುಂದ ಹಾಗೂ ಉಡುಗಣಿ ಹೋಬಳಿ ಭಾಗದ ಪಂಚಾಯ್ತಿ ವ್ಯಾಪ್ತಿಯ ರೈತರಿಗೆ ಹಣ ಲಭಿಸಿಲ್ಲ. ವಿಮಾ ಕಂಪೆನಿ ಅಧಿಕಾರಿಗಳು ರೈತರ ಜೀವನ ಜತೆ ಆಟ ಆಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆ ವಿಮೆಗೆ ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಪರಿಹಾರ ಸಿಗದಿರುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು. ಕೆಲ ರೈತರು ವಿಷದ ಬಾಟಲಿಯೊಂದಿಗೆ ಪ್ರತಿಭಟನೆಗೆ ಆಗಮಿಸಿದ್ದರು. ಇದನ್ನು ಗಮನಿಸಿದ ಮುಖಂಡರು, ರೈತರ ಮನವೊಲಿಸಿ ಅವರಿಂದ ಬಾಟಲಿಗಳನ್ನು ಪಡೆದುಕೊಂಡರು.
ಸ್ಥಳಕ್ಕೆ ಭೇಟಿ ನೀಡಿದ ಸಾಗರ ಉಪ ವಿಭಾಗಾಧಿಕಾರಿ ನಾಗರಾಜ್ ಹಾಗೂ ಕೃಷಿ ಇಲಾಖೆ ಅಧಿಕಾರಿ ಮಧುಸೂದನ್ ಅವರು ವಿಮಾ ಪರಿಹಾರ ಹಣ ಕೊಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಜಯಶೀಲ ಗೌಡ್ರು, ತಾಲ್ಲೂಕು ಘಟಕ ಗೌರವ ಅಧ್ಯಕ್ಷ ಪೇಟೆ ಈರಣ್ಣ, ಅಧ್ಯಕ್ಷ ಮುಗಳಿಕೊಪ್ಪ ರಾಜಣ್ಣ, ಕಾರ್ಯದರ್ಶಿ ಕೊಟ್ರೇಶಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.