ಸಾಗರ: ಮಲೆನಾಡು ಪ್ರದೇಶಕ್ಕೆ ಜೇನುಕೃಷಿ ಪೂರಕವಾಗಿದ್ದು, ರೈತರು ಮುಖ್ಯ ಬೆಳೆಯ ಜತೆಗೆ, ಉಪ ಕಸುಬು ಆಗಿ ಜೇನುಕೃಷಿಕೈಗೊಳ್ಳಬಹುದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಜೇನುಕೃಷಿ ವಿಜ್ಞಾನಿ ಶಿರಸಿಯ ಮಧುಕೇಶ್ವರ ಹೆಗಡೆ ಕಲ್ಲಳ್ಳಿ ಹೇಳಿದರು.
ತಾಲ್ಲೂಕಿನ ಸಸರವಳ್ಳಿ ಗ್ರಾಮದ ಮರಡವಳ್ಳಿ ಎಚ್.ಎ. ಶ್ರೀಕಾಂತ ಅವರ ಕೃಷಿಭೂಮಿಯಲ್ಲಿ ತೋಟಗಾರಿಕಾ ಬೆಳೆ ಕೃಷಿ ಸೌಹಾರ್ದ ವೇದಿಕೆ ಹಾಗೂ ರೈತ ಕೂಟ ಮಂಗಳವಾರ ಏರ್ಪಡಿಸಿದ್ದ ಜೇನು ಕೃಷಿ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈಜ್ಞಾನಿಕ ವಿಧಾನದಲ್ಲಿ ಜೇನು ಕೃಷಿ ಕೈಗೊಂಡರೆ ಹೆಚ್ಚು ಲಾಭ ಗಳಿಸಲು ಸಾಧ್ಯ. ಮಲೆನಾಡಿನಲ್ಲಿ ಶುದ್ಧವಾದ ಜೇನುತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇದ್ದು ಉತ್ತಮ ಮಾರುಕಟ್ಟೆ ದೊರಕಲು ಸಾಧ್ಯ. ಇದರ ಜತೆಗೆ, ಜೇನಿಗೆ ಬರುವ ರೋಗಗಳ ಬಗ್ಗೆ ಕೃಷಿಕರು ಮಾಹಿತಿ ಹೊಂದಿರಬೇಕು ಎಂದರು.
ಹಿರಿಯ ತೋಟಗಾರಿಕಾ ನಿರ್ದೇಶಕ ಡಿ.ಕೆ. ತಿಮ್ಮಪ್ಪ ಮಾತನಾಡಿ, ಜೇನುಕೃಷಿಗೆ ಇರುವ ವಿವಿಧ ರೀತಿ ಸಹಾಯಧನ ಸೌಲಭ್ಯ ಕುರಿತು ಮಾಹಿತಿ ನೀಡಿದರು.ಸಾಗರ ಜೇನುಕೃಷಿ ಸಹಕಾರ ಸಂಘದ ಅಧ್ಯಕ್ಷ ನಾಗೇಂದ್ರ ಸಾಗರ್ ಹಾಜರಿದ್ದರು.ಬಿ. ವಾಸುದೇವ ಗೋರಗದ್ದೆ ಸ್ವಾಗತಿಸಿದರು. ಶ್ರೀನಾಥ ಚಿಕ್ಕತೋಟ ವಂದಿಸಿದರು. ಗಣಪತಿ ಕಾಶಿ ಕಾರ್ಯಕ್ರಮ ನಿರೂಪಿಸಿದರು.