ಸೊರಬ: ‘ಊಹೆ ಮಾಡಲು ಸಾಧ್ಯ ಆಗದಷ್ಟು ಅನುದಾನ ತಾಲ್ಲೂಕಿಗೆ ಬಂದಿದೆ, ಬರುತ್ತಿದೆ. ತಾಲ್ಲೂಕಿನ 19 ಸಾವಿರ ಕುಟುಂಬಗಳು ಒಂದಲ್ಲಾ ಒಂದು ಸರ್ಕಾರಿ ಸೌಲಭ್ಯ ಪಡೆದಿವೆ’ ಎಂದು ಶಾಸಕ ಎಚ್. ಹಾಲಪ್ಪ ನುಡಿದರು.
ಸೋಮವಾರ ಸಮೀಪದ ಹಿರಳೆಯಲ್ಲಿ ಲೋಕೋಪಯೋಗಿ ಇಲಾಖೆಯ ನಬಾರ್ಡ್ ಯೋಜನೆ ಅಡಿ, ಮಾವಲಿ-ಕಡಸೂರು ರಸ್ತೆಯಿಂದ ಹಿರಳೆ-ಮೂಡಗೋಡು-ರಾಮಗೊಂಡನಕೊಪ್ಪ ಮೂಲಕ ಸಾಗುವ 2 ಕಿ.ಮೀ. ಅಂತರದ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದ 100 ಹಳ್ಳಿಗಳಿಗೆ ಡಾಂಬರೀಕರಣದ ಸೌಲಭ್ಯ ಒದಗಿಸುವ ಸಂಕಲ್ಪ ಹೊಂದಲಾಗಿದೆ ಎಂದ ಅವರು, ಅಂತರ್ಜಲ ಅಭಿವೃದ್ಧಿಗಾಗಿ ರೂ 13.8 ಕೋಟಿ ವೆಚ್ಚ ಮಾಡಲಾಗುತ್ತಿದೆ. ವರದಾ ನದಿಗೆ ಕಡಸೂರು ಹಾಗೂ ಚಂದ್ರಗುತ್ತಿ ಬಳಿ ಬ್ಯಾರೇಜ್ ನಿರ್ಮಾಣಕ್ಕಾಗಿ ಒಟ್ಟು ರೂ 9 ಕೋಟಿ ಮಂಜೂರಾತಿ ಆಗಿದೆ ಎಂದು ಮಾಹಿತಿ ನೀಡಿದರು.ಒಳ್ಳೆಯ ಪರಿಸರ ಸೃಷ್ಟಿಸುವ ಮೂಲಕ ಮಕ್ಕಳ ಸರ್ವತೋಮುಖ ಪ್ರಗತಿಗೆ ಮುಂದಾಗುವಂತೆ ಸಲಹೆ ನೀಡಿದರು.
ರೂ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮಾವಿನಹೊಳೆ ಬ್ಯಾರೇಜ್ಗೆ ರಾಮಗೊಂಡನಕೊಪ್ಪದ ಬಳಿ ಶಂಕುಸ್ಥಾಪನೆ ನೆರವೇರಿಸಿದರು. ಮೂಡುಗೋಡಿನ ಎಸ್ಸಿ ಕಾಲೊನಿ ಸಮೀಪ ಸಮುದಾಯ ಭವನ, ನಿಸರಾಣಿ ರಸ್ತೆ ಹಾಗೂ ಸರ್ಕಾರಿ ಹಿ.ಪ್ರಾ. ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಗ್ರಾ.ಪಂ. ಅಧ್ಯಕ್ಷ ಕೆ. ಅಜ್ಜಪ್ಪ ಅಧ್ಯಕ್ಷತೆ ವಹಿಸಿದ್ದರು.ಜಿ.ಪಂ. ಸದಸ್ಯ ಗುರುಕುಮಾರ್ ಎಸ್. ಪಾಟೀಲ್, ಗ್ರಾ.ಪಂ. ಉಪಾಧ್ಯಕ್ಷೆ ಶಾಂತಾ ಪರಸಪ್ಪ, ಸದಸ್ಯ ಅರುಣ್ಕುಮಾರ್, ಎಂ.ಆರ್. ಪಾಟೀಲ್, ಪಾಣಿ ರಾಜಪ್ಪ, ಜಯಶೀಲಗೌಡ, ಗಜಾನನರಾವ್, ಮೋಹನಗೌಡ. ಎಇಇ ವಿಶ್ವನಾಥ್ ಉಪಸ್ಥಿತರಿದ್ದರು.
ಗ್ರಾಮದಲ್ಲಿರುವ ಹಂದಿಗೋಡು ರೋಗಪೀಡಿತರಿಗೆ ಅಂಗವಿಕಲ ವೇತನ ಬಿಡುಗಡೆ, ವಿಧವಾವೇತನ ಬಿಡುಗಡೆ ಹಾಗೂ ಕೆರೆ ಅಭಿವೃದ್ಧಿ ಕುರಿತು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.