ಸಾಗರ: ಮಲೆನಾಡಿನಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲೂ ಮಳೆ ಇರುವುದರಿಂದ ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದ ಕ್ರೀಡಾಕೂಟಗಳನ್ನು ನವೆಂಬರ್ನಲ್ಲಿ ನಡೆಸುವುದು ಸೂಕ್ತ ಎಂದು ಭೀಮನಕೋಣೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ನಾಗರಾಜ್ ಹೇಳಿದರು.
ತಾಲ್ಲೂಕಿನ ಹೆಗ್ಗೋಡು ಸಮೀಪದ ಕೇಡಲಸರದಲ್ಲಿ ವಿದ್ಯಾಭಿವೃದ್ದಿ ಸಂಘ, ಎಸ್.ರೂಪಶ್ರೀ ಪದವಿಪೂರ್ವ ಕಾಲೇಜು, ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಎರಡು ದಿನಗಳ ಕಾಲ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷ ಸೆಪ್ಟೆಂಬರ್ನಲ್ಲಿ ಕಾಲೇಜುಮಟ್ಟದ ಕ್ರೀಡಾಕೂಟಗಳನ್ನು ಶಿಕ್ಷಣ ಇಲಾಖೆ ಸಂಘಟಿಸುತ್ತಿದ್ದು ಮಳೆಯಲ್ಲೇ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸ ಬೇಕಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ನೈಜ ಕ್ರೀಡಾ ಪ್ರತಿಭೆಯನ್ನು ತೋರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಅವರಿಗೆ ದೈಹಿಕವಾಗಿ ಅಪಾಯವಾಗುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರೀಡಾಕೂಟ ನಡೆಸುವ ಸಮಯದ ನಿರ್ಧಾರದ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಹೆಗ್ಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಲಾವತಿ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗೌರಮ್ಮ ರಾಮಪ್ಪ, ಸದಸ್ಯೆ ಶ್ಯಾಮಲ ದೇವರಾಜ್, ಪುರಪ್ಪೆಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಾರ್ವತಮ್ಮ, ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಭಾಗಿ, ಕೇಶವ ಸಂಪೆಕೈ ಹಾಜರಿದ್ದರು. ಕಾರುಣ್ಯ ಪ್ರಾರ್ಥಿಸಿದರು. ತಿಮ್ಮಪ್ಪ ಸ್ವಾಗತಿಸಿದರು. ಅಂಜಲಿ ವಂದಿಸಿದರು.
ಸರ್ ಎಂವಿ ಸ್ಮರಣೆ
ಭದ್ರಾವತಿ: ನಾಡಿನ ಆರ್ಥಿಕ, ಸಾಮಾಜಿಕ, ಸಾಹಿತ್ಯಿಕ ಹಾಗೂ ಇನ್ನಿತರ ಸೇವಾ ಕ್ಷೇತ್ರ ಬೆಳೆಯಲು ಸರ್.ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
ಹಿರಿಯೂರು ಗ್ರಾಮದ ಬಯಲು ರಂಗಮಂದಿರದಲ್ಲಿ ಹೋಬಳಿ ಕಸಾಪ ಘಟಕ ಉದ್ಘಾಟನೆ ಹಾಗೂ ಸರ್ಎಂವಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಸಾಪ ಸಂಸ್ಥಾಪಕರಾದ ಸರ್ಎಂವಿ, ನಾಡು ಸಂಸ್ಕೃತಿ ರಕ್ಷಣೆಯಲ್ಲೂ ಸಹ ಮುಂದಾಲೋಚನೆ ಹೊಂದಿದ್ದ ವ್ಯಕ್ತಿಯಾಗಿ ಅವರೆ ಕೊಡುಗೆ ಅವಿಸ್ಮರಣೀಯ ಎಂದರು.
ಪ್ರಾಧ್ಯಾಪಕ ಬಿ.ಎನ್. ರಾಮಸ್ವಾಮಿ, ಕೋಡ್ಲು ಯಜ್ಞಯ್ಯ, ಎಚ್.ವೈ. ಕುಮಾರ್ ಮಾತನಾಡಿದರು. ಎಸ್.ಬಿ. ಸಿದ್ದೋಜಿರಾವ್ ಬೋಸ್ಲೆ ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.