ತುಮಕೂರು: ನಗರದ ಸಿದ್ಧಗಂಗಾ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ರಾಜ್ಯ ಯುವ ಘಟಕದ ವತಿಯಿಂದ ಗಿಡ ನೆಡುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಸಿದ್ಧಲಿಂಗ ಸ್ವಾಮೀಜಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ 5 ಸಾವಿರ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಸಸಿ ನೆಟ್ಟು ಬೆಳೆಸುವ ಮೂಲಕ ನಾಡು ಉಳಿಸುವ ಅನಿವಾರ್ಯತೆ ಇದೆ. ಪರಿಸರ ಸಂರಕ್ಷಿಸಿದರೆ, ಅದು ನಮ್ಮನ್ನು ಕಾಪಾಡುತ್ತದೆ. ಜಗತ್ತಿನ ಎಲ್ಲೆಡೆ ಮಾಲಿನ್ಯ ಹೆಚ್ಚಾಗಿದ್ದು, ಅನಾಹುತಗಳು ಸಂಭವಿಸುತ್ತಿವೆ. ಪ್ರತಿನಿತ್ಯ ಸೇವಿಸುವ ಆಹಾರ, ಗಾಳಿ, ಕುಡಿಯುವ ನೀರು ವಿಷವಾಗುತ್ತಿದೆ. ಮಾಲಿನ್ಯದಿಂದ ಇಡೀ ಮನುಕುಲ ನಾಶವಾಗುವಂತಹ ಪರಿಸ್ಥಿತಿ ಕಾಣುತ್ತಿದ್ದೇವೆ ಎಂದು ಖಂಡ್ರೆ ತಿಳಿಸಿದರು.
ಕೋವಿಡ್ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಹಲವರು ಪ್ರಾಣ ಕಳೆದುಕೊಂಡರು. ಸಸಿಗಳನ್ನು ನೆಟ್ಟು, ದಟ್ಟ ಅರಣ್ಯ ಬೆಳೆಸುವಂತಹ, ವನ್ಯ ಸಂಪತ್ತು ಸಂರಕ್ಷಣೆ ಮಾಡುವತ್ತ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.
ಸಿದ್ಧಲಿಂಗ ಸ್ವಾಮೀಜಿ, ‘ಮನುಷ್ಯರ ಬದುಕಿಗೆ ಮರಗಿಡಗಳು, ಪ್ರಕೃತಿ ಬೇಕೇ ಹೊರತು, ಪ್ರಕೃತಿಗೆ ಮನುಷ್ಯ ಬೇಕಾಗಿಲ್ಲ. ಆರೋಗ್ಯಪೂರ್ಣ ಜೀವನ ನಡೆಸಲು ಉತ್ತಮ ವಾತಾವರಣ ಅವಶ್ಯಕ. ಅದಕ್ಕಾಗಿ ‘ಸಿದ್ಧಗಂಗಾ ಅರಣ್ಯ’ ಎಂಬ ಹೆಸರನ್ನಿಟ್ಟು ವಿವಿಧ ಬಗೆಯ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತದೆ’ ಎಂದು ಹೇಳಿದರು.
ಅನ್ನದಾನ, ವಿದ್ಯಾದಾನಕ್ಕಿಂತ ರಕ್ತದಾನ, ಅಂಗಾಂಗ ದಾನ ಶ್ರೇಷ್ಠವಾಗಿದೆ. ಮನುಷ್ಯ ಬದುಕಿದ್ದಾಗ ರಕ್ತದಾನ ಮಾಡಿದರೆ ಮತ್ತೊಬ್ಬರ ಜೀವ ಉಳಿಯುತ್ತದೆ. ಮನುಷ್ಯ ಮರಣಹೊಂದಿದ ಸಮಯದಲ್ಲಿ ಅಂಗಾಂಗ ದಾನ ಮಾಡಿದರೆ ಇತರರಿಗೆ ಅನುಕೂಲವಾಗಲಿದೆ’ ಎಂದು ಸಲಹೆ ಮಾಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ, ‘ಸಿದ್ಧಲಿಂಗ ಸ್ವಾಮೀಜಿ ಜನ್ಮದಿನದ ಪ್ರಯುಕ್ತ 5 ಸಾವಿರ ಗಿಡಗಳನ್ನು ನೆಡಲು ಚಾಲನೆ ನೀಡಲಾಗಿದೆ’ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಕುಮಾರ್ ಪಟೇಲ್, ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ಮಧುರಾ ಅಶೋಕ್, ಸಾಗರನಹಳ್ಳಿ ನಟರಾಜ್, ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಮಹಂತೇಶ್ ಪಾಟೀಲ್,ಗಂಗಾಬಿಕೆ ಮಲ್ಲಿಕಾರ್ಜುನ್, ಎಂ.ಬಿ.ಕುಮಾರ್ ಉಪಸ್ಥಿತರಿದ್ದರು.