ತುಮಕೂರು: ಮಹಾತ್ಮಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಲಘುವಾಗಿ ಮಾತನಾಡಿರುವ ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಅನಂತ್ಕುಮಾರ್ ಹೆಗಡೆ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ನಗರದ ಭದ್ರಮ್ಮ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜಮಾಯಿಸಿ, ಬಿಜೆಪಿ ಸರ್ಕಾರ ಹಾಗೂ ಹೆಗಡೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ‘ಸಿಎಎ, ಎನ್ಆರ್ಸಿ ಕಾಯ್ದೆ ಜಾರಿಗೊಳಿಸಿ ರಾಷ್ಟ್ರ ಬಿಜೆಪಿ ವಿಭಾಗಿಸಿದೆ. ಅನಂತ್ಕುಮಾರ್ ಹೆಗಡೆ ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನು ಮಧ್ಯವರ್ತಿ ಎನ್ನುತ್ತಾರೆ’ ಎಂದರು.
ಅಂಬೇಡ್ಕರ್ ಅವರನ್ನು ಒಪ್ಪದ ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಯುವ ಸಮೂಹವನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿದರು.
ಮೇಯರ್ ಫರೀದಾ ಬೇಗಂ ಮಾತನಾಡಿ, ಸಂಸದ ಅನಂತ್ಕುಮಾರ್ ಹೆಗಡೆಗೆ ಗಾಂಧೀಜಿ ಬಗ್ಗೆ ಗೊತ್ತಿಲ್ಲದೆ ಏನೇನೋ ಹೇಳುತ್ತಿದ್ದಾರೆ. ಮೊದಲು ಅವರು ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನು ಓದಬೇಕು. ತಪ್ಪು ಹೇಳಿಕೆಗಳನ್ನು ನೀಡಿದರೆ ಸಹಿಸುವುದಿಲ್ಲ. ಭಾರತ ಇರುವವರೆಗೆ ಮಹಾತ್ಮಗಾಂಧಿ ಅವರು ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದರು.