ಪಾವಗಡ: ಕಾನೂನು ಬಾಹಿರವಾಗಿ ಕರೆಯಿಂದ ಮಣ್ಣು ತೆಗೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕಿನ ಅರಸೀಕೆರೆ ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮದ ಹಂಪಯ್ಯನ ಕೆರೆ ಏರಿಗೆ ಹೊಂದಿಕೊಂಡು 25 ಅಡಿ ಆಳದವರೆಗೆ ಮರಳು, ಮಣ್ಣನ್ನು ಬಗೆದು ಸಾಗಿಸಲಾಗಿದೆ. ಇದರಿಂದ ಕೆರೆ ಕಟ್ಟೆಗೆ ಸಮಸ್ಯೆಯಾಗಿ ಕೆರೆ ಏರಿ ಕೊಚ್ಚಿಹೋಗಲಿದೆ. ಮುಂದಿನ ದಿನಗಳಲ್ಲಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಿಸಬಾರದು. ಕೆರೆಯಿಂದ ಮರಳು, ಮಣ್ಣು ಸಾಗಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಗ್ರಾಮದ ಪ್ರಮುಖರು ಗುರುವಾರ ಪೊಲೀಸ್ ಠಾಣೆಗೆ ದೂರು ನೀಡಿದರು.
ಕೃಷಿ ಉದ್ದೇಶಕ್ಕಾಗಿ ತೋಟ, ಜಮೀನುಗಳಿಗೆ ಮಣ್ಣು ಸಾಗಿಸುವ ರೈತರು ಗ್ರಾಮ ಪಂಚಾಯಿತಿ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಪಡೆದುಕೊಂಡು ಕೆರೆ ಏರಿಯ 100 ಮೀಟರ್ ಪ್ರದೇಶವನ್ನು ಹೊರತುಪಡಿಸಿ ಮಣ್ಣು ತೆಗೆಯಬೇಕು. ಯಾವುದೇ ಕಾರಣದಿಂದ ಮರಳು ಸಾಗಿಸಬಾರದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ನಾಗರಾಜ್, ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಪಿ. ದೊಡ್ಡಣ್ಣ, ಕೆರೆ ಸಂಘದ ಅಧ್ಯಕ್ಷ ಸಿದ್ಧಲಿಂಗಪ್ಪ, ರಾಮಕೃಷ್ಣಪ್ಪ, ರೈತ ಸಂಘದ ಅಧ್ಯಕ್ಷ ಮಲ್ಲೇಶ್, ರಮೇಶ್, ರುದ್ರಮುನಿ, ಹನುಮಂತರಾಯಪ್ಪ ಉಪಸ್ಥಿತರಿದ್ದರು.