ತುಮಕೂರು: ನಗರದಲ್ಲಿ ವೀರಶೈವ ಸಮಾಜದ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ರೇಣುಕಾಚಾರ್ಯ, ಬಸವೇಶ್ವರ ಹಾಗೂ ಸಿದ್ಧರಾಮೇಶ್ವರ ಜಯಂತಿಯಲ್ಲಿ ನಡೆದ ಮೆರವಣಿಗೆ ಅದ್ಧೂರಿಯಾಗಿತ್ತು.
ಮಂಗಳವಾರ ವೀರಶೈವ ಧರ್ಮ ಸಮ್ಮೇಳನ ನಡೆದಿತ್ತು. ಬುಧವಾರ ವೀರಶೈವ–ಲಿಂಗಾಯತ ಸಮಾಜದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ರೇಣುಕಾಚಾರ್ಯ, ಬಸವಣ್ಣ, ಸಿದ್ದರಾಮೇಶ್ವರರಿಗೆ ಕೋಡಿ ಬಸವೇಶ್ವರ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ಜರುಗಿತು.
ಮಧ್ಯಾಹ್ನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಎಸ್ಐಟಿ ಕಾಲೇಜಿನ ಗಣಪತಿ ದೇವಸ್ಥಾನದಿಂದ ಮೆರವಣಿಗೆಗೆ ಚಾಲನೆ ನೀಡಿದರು. ಚಿಕ್ಕತೊಟ್ಲುಕೆರೆ ಮತ್ತು ಬೆಳ್ಳಾವಿ ಮಠದ ಸ್ವಾಮೀಜಿಗಳು, ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಕೋರಿ ಮಂಜುನಾಥ್ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.
ಅಲಂಕೃತ ಸಾರೋಟಿನಲ್ಲಿ ಬಸವೇಶ್ವರರ ಮೂರ್ತಿಯ ಮೆರವಣಿಗೆ ಹೊರಟಿತು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಂಚರಿಸಿ ಕೋಡಿ ಬಸವೇಶ್ವರ ದೇವಸ್ಥಾನದ ಬಳಿ ಸಮಾಪ್ತಿಯಾಯಿತು. ನಂದಿಧ್ವಜ, ವೀರಗಾಸೆ ಹೀಗೆ ನಾನಾ ಕಲಾ ಪ್ರಕಾರಗಳು ಮೆರವಣಿಗೆಯ ವೈಭವವನ್ನು ಹೆಚ್ಚಿಸಿದವು.