ತುಮಕೂರು: ರಾಜಕೀಯ, ಧಾರ್ಮಿಕ, ಸಂಸ್ಕೃತಿ, ರಾಷ್ಟ್ರೀಯತೆಗಳೆಲ್ಲ ಅಪಮೌಲ್ಯೀಕರಣವಾಗಿ ಮಕ್ಕಳ ಮೇಲೆ ಅತ್ಯಾಚಾರ, ರೈತರ ಆತ್ಮಹತ್ಯೆ ಮೂಲಕ ಸ್ವಾತಂತ್ರ್ಯ ಇಂದು ಅಪಹಾಸ್ಯಕ್ಕೀಡಾಗುತ್ತಿದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
ನಗರದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ಪತ್ರಕರ್ತ ಜಿ.ಇಂದ್ರಕುಮಾರ್ ಅವರ ಕೃತಿ ‘ಬಹುಜನ ಸಂಗ್ರಾಮ’ ಸಂಶೋಧನಾ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
‘ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಧಾರ್ಮಿಕ ನ್ಯಾಯ ದೇಶದ ಧರ್ಮವಾಗಬೇಕು. ಗಾಂಧೀಜಿ ಹೇಳಿದ ಕೋಮು ಸಾಮರಸ್ಯದಿಂದ ಎಲ್ಲ ಧರ್ಮಗಳ ಹಿತರಕ್ಷಣೆಯಾಗುತ್ತದೆ’ ಎಂದು ಪ್ರಸಿದ್ಧ ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.
‘ಗೋಡ್ಸೆ ಪ್ರೇರಿತ ರಾಷ್ಟ್ರೀಯ ವಾದವನ್ನು ಏಕಸಂಸ್ಕೃತಿ ದೇಶದ ಮೇಲೆ ಹೇರಲು ಹೊರಟಿದೆ. ಬಹುಸಂಸ್ಕೃತಿ ಮತ್ತು ಏಕ ಸಂಸ್ಕೃತಿಗಳ ಸಮ್ಮಿಲನದಿಂದ ಭಾರತ ದೇಶ ಸಾಮರಸ್ಯದ ವಿಕಾಸಕ್ಕೆ ನಾಂದಿಯಾಗಬೇಕು ಎಂದು ತಿಳಿಸಿದರು.
‘ಬಹುಸಂಸ್ಕೃತಿ ಮತ್ತು ಬಹುಜನರು ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡುವ ಮೂಲಕ ದೇಶಕ್ಕೆ ಬಹುದೊಡ್ಡ ಚರಿತ್ರೆಯನ್ನು ನಿರ್ಮಿಸಲು ಕಾರಣವಾದರು. ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸಿದ ನೂರಾರು ಮಂದಿ ಅಲಕ್ಷಿತ ಸಮುದಾಯದ ಜನರ ಶ್ರಮವನ್ನು ಬಹುಜನ ಸಂಗ್ರಾಮ ಕೃತಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ’ ಎಂದು ಹೇಳಿದರು.
ವಿಮರ್ಶಕ, ಉಪನ್ಯಾಸಕ ಡಾ. ರವಿಕುಮಾರ್ ನೀಹ ಮಾತನಾಡಿ, ‘ಬಹುಜನ ಸಂಗ್ರಾಮ ಕೃತಿಯನ್ನು ಕುರಿತು ಅಲಕ್ಷಿತ ಸಮುದಾಯಗಳು ಸಮಾಜಕ್ಕೆ ನೀಡಿರುವ ಕೊಡುಗೆ, ಸಮುದಾಯಗಳ ಹಿತರಕ್ಷಣೆ, ಸ್ಥಳೀಯ ಚರಿತ್ರೆ ಮೂಲಕ ಬಹುಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಅಧ್ಯಕ್ಷತೆ ವಹಿಸಿದ್ದರು.ಸ್ಟೂಡೆಂಟ್ ಬುಕ್ ಹೌಸ್ ಮಾಲೀಕ ಸದಾಶಿವ, ಲೇಖಕರಾದ ವಿಜಯಾ ಮೋಹನ್ ಇದ್ದರು. ಪ್ರಾಚಾರ್ಯರಾದ ಬಾಬುರಾವ್ ಕುಂದಗೋಳ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ.ಲೀಲಾ ಲೇಪಾಕ್ಷಿ ನಿರೂಪಿಸಿದರು.