ಸಿದ್ದಾಪುರ ಕೆರೆಯಲ್ಲಿ ಹೇಮಾವತಿ ನೀರನ್ನು ಶೇಖರಣೆ ಮಾಡಲಾಗಿದ್ದು, ಆಹಾರಕ್ಕಾಗಿ ಸ್ವದೇಶಿ ಹಾಗೂ ವಿದೇಶದಿಂದ ಬಗೆ ಬಗೆ ಪಕ್ಷಿಗಳು ಬಂದಿವೆ.
ಕೊಕ್ಕರೆ, ಬೆಳ್ಳಕ್ಕಿ, ನೀರು ನವಿಲು, ನೀರು ಕಾಗೆ, ಹಾವಕ್ಕಿ, ಗುಬ್ಬಚ್ಚಿ, ಬಣ್ಣ ಬಣ್ಣದ ಕೊಕ್ಕರೆಗಳು ಸೇರಿದಂತೆ ವಿವಿಧ ಬಗೆಯ ಪಕ್ಷಿಗಳು ಆಹಾರ ಹುಡುಕುತ್ತಾ, ಅತ್ತ ಇತ್ತ ಕೂಗುತ್ತಾ ಹಾರಾಡುತ್ತಿವೆ.
ಕೆರೆಯಲ್ಲಿ ಮೀನು, ಏಡಿ ಹಾಗೂ ಕ್ರಿಮಿ ಕೀಟಗಳನ್ನು ಹೊಂಚು ಹಾಕಿ ತಿನ್ನುತ್ತಿವೆ. ಕೆರೆಯಲ್ಲಿ ಗುಂಪು ಗುಂಪಾಗಿ ವಿಹರಿಸುವ ಬಣ್ಣ ಬಣ್ಣದ ಈ ಹಕ್ಕಿಗಳನ್ನು ಕಂಡಾಗ ನೀರಲ್ಲಿ ರಂಗೋಲಿ ಹಾಕಿದಂತೆ ಬಾಸವಾಗುತ್ತದೆ. ನೀರಲ್ಲಿ ಗಂಭೀರವಾಗಿ ಚಲಿಸುವುದನ್ನು ಕಂಡರೆ ಮನಸು ಪುಳಕಗೊಳ್ಳುತ್ತದೆ.
ಕೆರೆ ಏರಿ ಹಾಗೂ ಹೂಳು ಎತ್ತುವ ಕಾಮಗಾರಿ ಕೆಲಸ ನಡೆಯುತ್ತಿರುವುದರಿಂದ ಹಕ್ಕಿಗಳು ಬೇರೆಡೆಗೆ ಪಲಾಯನ ಮಾಡುತ್ತಿವೆ ಎನ್ನುವ ಆತಂಕ ಕೆಲವರದ್ದು. ಪಕ್ಷಿಗಳ ಕಲರವ ಕಂಡು ಜನರು ಸೆಲ್ಫಿ ಹಾಗೂ ಫೋಟೊ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ.
ನಿತ್ಯ ಬೆಳಿಗ್ಗೆ 6ರಿಂದ 8ರವರೆಗೂ ದೊಡ್ಡ ದೊಡ್ಡ ಪಕ್ಷಿಗಳು ದೂರದಿಂದ ಬಂದು ಕೆರೆ ಅಂಗಳದಲ್ಲಿ ಆಹಾರ ಸೇವಿಸಿ ವಾಸಸ್ಥಳಕ್ಕೆ ತೆರಳುತ್ತವೆ. ಇನ್ನು ಕೆಲವು ನೀರಿನಲ್ಲಿ ಸಂಜೆವರೆಗೂ ಆಹಾರ ಹುಡುಕುತ್ತ ಹಾಗೂ ಆಟ ಮುಂದುವರಿಸುತ್ತವೆ.
‘ಸಿದ್ದಾಪುರ ಕೆರೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿದರೆ ವಿವಿಧ ಬಗೆಯ ಪಕ್ಷಿಗಳ ಆವಾಸ ತಾಣವಾಗಲಿದೆ’ ಎಂಬುದು ಪಕ್ಷಿ ಪ್ರಿಯರ ಅಂಬೋಣ.