ಮಧುಗಿರಿ: ಕಮ್ಮಾರ ಸಮುದಾಯ ಸೇರಿದಂತೆ ಇತರೆ ಸಣ್ಣ ಸಮುದಾಯದ ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮಾಡಿಸುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ತಾಲ್ಲೂಕಿನ ನಿಟ್ರಹಳ್ಳಿಯ ಆದಿಲಕ್ಷ್ಮಿ ಸಂಸ್ಥಾನ ಆವರಣದಲ್ಲಿ ವಿಶ್ವಕರ್ಮ ಸಂಪನ್ಮೂಲ ಚಾರಿಟಬಲ್ ಟ್ರಸ್ಟ್ ಹಾಗೂ ರಾಜ್ಯ ಕಮ್ಮಾರ ಸಂಘಗಳ ಒಕ್ಕೂಟ ಆಯೋಜಿಸಿದ್ದ ಧನ್ವಂತರಿ ಹೋಮ ಹಾಗೂ ವೈಶ್ವ ಕರ್ಮಣ ಯಜ್ಞ ಹಾಗೂ ನಿಜಶರಣ ಕಮ್ಮಾರ ಕಲ್ಲಯ್ಯ ಮಠ ಉದ್ಘಾಟಿಸಿ ಮಾತನಾಡಿರು.
‘ವಿಶ್ವಕರ್ಮ ಸಮುದಾಯವನ್ನು ಬಿಟ್ಟು ಯಾರು ಬದುಕಲು ಸಾಧ್ಯವಿಲ್ಲ ಎಂದರು. ಹಿಂದೂ ಧರ್ಮದಲ್ಲಿ ಕಸಬು ಆಧಾರದ ಮೇಲೆ ಸಮಾಜವನ್ನು ವರ್ಗೀಕರಿಸಲಾಗಿದೆ. ಕಮ್ಮಾರ ಸಮುದಾಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಹಾಗೂ ಸದಾ ಅವರ ಜೊತೆಗಿದ್ದು, ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಲಾಗುವುದು’ ಎಂದರು.
ನಿಟ್ಟರಹಳ್ಳಿ ಆದಿ ಲಕ್ಷ್ಮಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನೀಲಕಂಠಾಚಾರ್ಯ ಸ್ವಾಮೀಜಿ ಮಾತನಾಡಿ, ‘ಕಮ್ಮಾರನ ಪೀಠ ಸ್ಥಾಪನೆ ಮಾಡುವಾಗ ಅನೇಕ ತೊಂದರೆಗಳು ಎದುರಾದವು. ಆದರೂ ಯಾವುದಕ್ಕು ಜಗ್ಗದೇ ಮಠ ಸ್ಥಾಪಿಸಲಾಗಿದೆ. ಕಮ್ಮಾರರ ಏಳಿಗೆಗೆ ಬಿಕ್ಷೆ ಬೇಡಲು ಸಿದ್ಧ. ಸಂಸ್ಥೆಯ ಐಟಿಐ ಕಾಲೇಜಿನಲ್ಲಿ ಶೇ50ರಷ್ಟು ಸೀಟುಗಳನ್ನು ಕಮ್ಮಾರ ಸಮುದಾಯದ ಮಕ್ಕಳಿಗೆ ಮೀಸಲು ಇರಿಸಲಾಗುವುದು’ ಎಂದರು.
ತಗ್ಗೀಹಳ್ಳಿ ಆಶ್ರಮದ ಪೀಠಾಧ್ಯಕ್ಷ ರಮಾನಂದ ಚೈತನ್ಯ ಸ್ವಾಮೀಜಿ ಮಾತನಾಡಿದರು. ರಾಜ್ಯ ಕಮ್ಮಾರ ಸಂಘಗಳ ಒಕ್ಕೂಟದ ಹನುಮಂತಯ್ಯ, ಕಾರ್ಯಾಧ್ಯಕ್ಷ ಈಶ್ವರಪ್ಪ, ಗೌರವಾಧ್ಯಕ್ಷ ಕೆ.ಪಿ.ನಾಗೇಂದ್ರ, ಮಹೇಶ್ ಕಮ್ಮಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಎನ್.ಮಂಜುನಾಥ್ ಇದ್ದರು.